ಕಾಸರಗೋಡು: ಸರಕು ಲಾರಿ ಢಿಕ್ಕಿ ಹೊಡೆದು ಗಾಯಗೊಂಡಿದ್ದ ಸ್ಕೂಟರ್ ಪ್ರಯಾಣಿಕ ಮೃತಪಟ್ಟರು. ಚೆಂಬರಿಕ ತುರುತ್ತಿ ನಿವಾಸಿ ಟಿ.ಎಂ. ಅಬ್ದುಲ್ ರಹ್ಮಾನ್ (62) ಮೃತಪಟ್ಟ ವ್ಯಕ್ತಿ. ಮಂಗಳವಾರ ಮಧ್ಯಾಹ್ನ ಮೇಲ್ಪರಂಬ ಜಂಕ್ಷನ್ನಲ್ಲಿ ಅಪಘಾತ ಸಂಭವಿಸಿತ್ತು. ಟಿ.ಎಂ. ಅಬ್ದುಲ್ ರಹ್ಮಾನ್ ಚಲಾಯಿಸಿದ ಸ್ಕೂಟರ್ಗೆ ಕಾಸರಗೋಡಿಗೆ ತೆರಳುತ್ತಿದ್ದ ಲಾರಿ ಢಿಕ್ಕಿ ಹೊಡೆದಿತ್ತು. ಇದರಿಂದ ಗಂಭೀರ ಗಾಯಗೊಂಡ ಇವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ಸಂಜೆ ನಿಧನ ಸಂಭವಿಸಿದೆ.
ಮದ್ರಸಾ ಅಧ್ಯಾಪಕನಾಗಿಯೂ, ಕಾಸರಗೋಡು ಖಾಸಗಿ ಆಸ್ಪತ್ರೆಯ ಪಿಆರ್ಒ ಆಗಿಯೂ ಇವರು ಕೆಲಸ ನಿರ್ವಹಿಸಿದ್ದರು. ಮುಸ್ಲಿಂ ಲೀಗ್ ಹಾಗೂ ನ್ಯಾಶನಲ್ ಲೀಗ್ನ ನಾಯಕತ್ವ ಸ್ಥಾನಗಳಲ್ಲಿ ಕಾರ್ಯಾಚರಿಸಿದ್ದರು. ಮೃತರು ಪತ್ನಿ ರಾಬಿಯ, ಮಕ್ಕಳಾದ ಮೊಹಮ್ಮದ್ ರಾಶಿದ್, ರೈಹಾನ, ಅಳಿಯ ಅಬ್ದುಲ್ ಅಸೀಸ್, ಸಹೋದರರಾದ ಅಬೂಬಕ್ಕರ್, ಹಸೈನಾರ್, ಸಾಲಿ, ಸುಲೈಮಾನ್, ಅಬ್ದುಲ್ಲ ಕುಂಞಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







