ಕುಂಬಳೆಯಲ್ಲಿ ಟ್ರಾಫಿಕ್ ಪರಿಷ್ಕಾರ: ಲೀಗ್ ಪಂಚಾಯತ್ ಆಡಳಿತ ಸಮಿತಿ ವಿರುದ್ಧ ಲೀಗ್ ವ್ಯಾಪಾರಿ ನೇತಾರನ ನೇತೃತ್ವದಲ್ಲಿ ಚಳವಳಿಗೆ ಸಿದ್ಧತೆ

ಕುಂಬಳೆ: ಪಂಚಾಯತ್ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವಾಗಲೇ ಕುಂಬಳೆಯಲ್ಲಿ ಲೀಗ್ ಪಂಚಾಯತ್ ಆಡಳಿತ ಸಮಿತಿ ವಿರುದ್ಧ ಲೀಗ್ ನೇತಾರನಾದ ವ್ಯಾಪಾರಿ ನೇತಾರ ಚಳವಳಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಪಂಚಾಯತ್ ಆಡಳಿತ ಸಮಿತಿ ಕುಂಬಳೆ ಪೇಟೆಯಲ್ಲಿ ಜ್ಯಾರಿಗೊಳಿಸಿದ ಟ್ರಾಫಿಕ್ ಪರಿಷ್ಕರಣೆ ವಿರುದ್ಧ ಮರ್ಚೆಂಟ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಸತ್ತಾರ್ ಆರಿಕ್ಕಾಡಿ ಅವರ ಉಪಸ್ಥಿತಿಯಲ್ಲಿ ಸೇರಿದ ಸಭೆ ಪಂಚಾಯತ್ ಕಚೇರಿಗೆ ಮಾರ್ಚ್ ನಡೆಸಲು ಹಾಗೂ ಹರತಾಳ ನಡೆಸಲು ತೀರ್ಮಾನಿಸಿದೆ. ಟ್ರಾಫಿಕ್ ಪರಿಷ್ಕಾರಕ್ಕೆ ಸಂಬಂಧಿಸಿ ಸಾರ್ವಜನಿಕರು ಹಾಗೂ ವ್ಯಾಪಾರಿಗಳು ನೀಡಿದ ದೂರುಗಳನ್ನು ಚರ್ಚೆ ನಡೆಸಲು ಕರೆದ ಸಭೆಯಲ್ಲಿ ಟ್ರಾಫಿಕ್ ಪರಿಷ್ಕರಣೆಯ ಲೋಪದೋಷಗಳನ್ನು ಎತ್ತಿ ಹಿಡಿದಿರುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಹಳೆಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಲು ಹಾಗೂ ಹತ್ತಿಸಲು ವ್ಯವಸ್ಥೆ ಏರ್ಪಡಿಸಬೇಕೆಂದು ಸಭೆ ಆಗ್ರಹಪಟ್ಟಿದ್ದರೂ ಪಂಚಾಯತ್ ಅಧಿಕಾರಿಗಳು ಸಭೆಯನ್ನು ಪ್ರಹಸನಗೊಳಿಸಿ ಸಾರ್ವಜನಿಕರ, ವ್ಯಾಪಾರಿಗಳ, ರಾಜಕೀಯ ಪಕ್ಷಗಳ ನಿರ್ದೇಶಗಳನ್ನು ಅವಗಣಿಸಿದ್ದಾರೆ. ಪಂಚಾಯತ್ ಆಡಳಿತ ಸಮಿತಿ ಪೊಲೀಸರನ್ನು ಸೇರಿಸಿಕೊಂಡು ನಡೆಸುವ ಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಮುನ್ನೆಚ್ಚರಿಕೆ ನೀಡಲಾಗಿದೆ. ಅಲ್ಲದೆ ತೀವ್ರ ಚಳವಳಿಗೆ ರೂಪು ನೀಡಿರುವುದಾಗಿ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕುಂಬಳೆ ಯೂನಿಟ್ ಕಮಿಟಿ ತಿಳಿಸಿದೆ. ಜನಪರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಕುಂಬಳೆಯಲ್ಲಿ ಅಂಗಡಿಗಳನ್ನು ಮುಚ್ಚಿ ಹರತಾಳ ನಡೆಸಲು ಹಾಗೂ ಕುಂಬಳೆ ಪಂಚಾಯತ್ ಕಚೇರಿಗೆ ಮಾರ್ಚ್ ನಡೆಸಲು ತೀರ್ಮಾನಿಸಿರುವುದಾಗಿ ಅಧ್ಯಕ್ಷ ರಾಜೇಶ್ ಮನಯತ್, ಕಾರ್ಯದರ್ಶಿ ಸತ್ತಾರ್ ಆರಿಕ್ಕಾಡಿ ತಿಳಿಸಿದ್ದಾರೆ.

You cannot copy contents of this page