ಬಾಲಕನ ಚಿಕಿತ್ಸಾ ಸಹಾಯಕ್ಕಾಗಿ ಪೆರ್ಮುದೆ ರೂಟ್ ಬಸ್‌ಗಳ ಕಾರುಣ್ಯ ಯಾತ್ರೆ

ಪೆರ್ಮುದೆ: ಅಪೂರ್ವ ರೋಗ ತಗಲಿ ಚಿಕಿತ್ಸೆ ಪಡೆಯುತ್ತಿರುವ ಪೆರ್ಮುದೆ ಸಮೀಪದ ಕೆಣಿಮೂಲೆ ನಿವಾಸಿ ರೌಫ್ ಎಂಬವರ ಎರಡರ ಹರೆಯದ ಪುತ್ರ ಮುಹಮ್ಮದ್ ರಹೀಫ್‌ನ ಶಸ್ತ್ರ ಚಿಕಿತ್ಸೆಗೆ  ಭಾರಿ ವೆಚ್ಚ ತಗಲಿದೆಯೆಂದು ಕುಟುಂಬ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಚಿಕಿತ್ಸಾ ಸಹಾಯಕ್ಕಾಗಿ ಪೆರ್ಮುದೆ-ಬಂದ್ಯೋಡು-ಕುಂಬಳೆ-ಕಾಸರಗೋಡು ರೂಟ್‌ನಲ್ಲಿ ಸಂಚರಿಸುವ ಜಿಸ್ತಿಯ ಹಾಗೂ ಗಝಲ್ ಬಸ್‌ಗಳು ಕಾರುಣ್ಯ ಯಾತ್ರೆ ನಡೆಸಿವೆ.

ಪೆರ್ಮುದೆಯಲ್ಲಿ  ಬಸ್‌ಗಳ ಕಾರುಣ್ಯ ಯಾತ್ರೆಗೆ ಚಾಲನೆ ನೀಡಲಾಗಿದೆ. ಈ ವೇಳೆ ಪೈವಳಿಕೆ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಶ್ರೀನಿವಾಸ, ಮಾಜಿ ಸದಸ್ಯ ಅಮೀರ್ ಪೆರ್ಮುದೆ, ಚಾಲಕರಾದ ಸವಾದ್ ದೀನಾರ್, ಖಾಲಿದ್, ನಿರ್ವಾಹಕರಾದ ಹನೀಫ್ ಚೇರಾಲು, ಯೂಸಫ್, ಸ್ಥಳೀಯರು ಉಪಸ್ಥಿತರಿದ್ದರು. ಸುಮಾರು 50 ಸಾವಿರ ರೂ. ಸಂಗ್ರಹಿಸಲಾಗಿದೆ.

You cannot copy contents of this page