ಕಾಸರಗೋಡು: ಕೇಂದ್ರ ಕಾರ್ಮಿಕ ಸಂಘಟನೆಗಳು ಹಾಗೂ ರಾಷ್ಟ್ರೀಯ ಕಾರ್ಮಿಕ ಫೆಡರೇಶನ್ ಜಂಟಿಯಾಗಿ ಆಹ್ವಾನ ನೀಡಿರುವ 24 ತಾಸುಗಳ ರಾಷ್ಟ್ರೀಯ ಮುಷ್ಕರ ಇಂದು ರಾತ್ರಿ ೧೨ ಗಂಟೆಯಿಂದ ಆರಂಭಗೊಳ್ಳಲಿದೆ. ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದೂ ಅಂತಹ ನೀತಿಯನ್ನು ಪ್ರತಿಭಟಿಸಿ ಈ ರಾಷ್ಟ್ರೀಯ ಮುಷ್ಕರಕ್ಕೆ ಆಹ್ವಾನ ನೀಡಲಾಗಿರುವ ಕೃಷಿ, ಉದ್ದಿಮೆ ಹಾಗೂ ವ್ಯಾಪಾರ ವಲಯಗಳ ಕಾರ್ಮಿಕರೂ ಈ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆಂದು ಸಂಯುಕ್ತ ಮುಷ್ಕರ ಸಮಿತಿ ತಿಳಿಸಿದೆ.
ಉದ್ಯೋಗಖಾತರಿ ಯೋಜನೆಯನ್ನು ಮರುಸ್ಥಾಪಿಸಬೇಕು. ವಿದ್ಯುತ್, ಬೀಜ ತಿದ್ದುಪಡಿ ಮಸೂದೆಗಳನ್ನು ಹಿಂಪಡೆಯಬೇಕು ಹಾಗೂ ಇತರ ಹಲವು ಬೇಡಿಕೆಗಳನ್ನು ಮುಂದಿರಿಸಿಕೊಂಡು ಈ ಮುಷ್ಕರ ನಡೆಸಲಾಗುತ್ತಿದೆ. ಹಾಲು ಮತ್ತು ಪತ್ರಿಕೆಗಳ ವಿತರಣೆ, ಆಸ್ಪತ್ರೆ, ಔಷಧದಂಗಡಿಗಳು, ಅಗ್ನಿಶಮನ ಸೇವೆ ಮತ್ತು ಆಂಬುಲೆನ್ಸ್ ಸೇವೆಗಳನ್ನು ಈ ಮುಷ್ಕರದಿಂದ ಹೊರತುಪಡಿಸಲಾಗಿದೆ. ಖಾಸಗಿ ವಾಹನಗಳು ರಸ್ತೆಗಿಳಿಯದೆ ಮುಷ್ಕರದೊಂದಿಗೆ ಸಹಕರಿಸಬೇಕೆಂದು ಸಂಯುಕ್ತ ಟ್ರೇಡ್ ಯೂನಿಯನ್ ನೇತಾರರು ವಿನಂತಿಸಿಕೊಂಡಿದ್ದಾರೆ.
ಐಎನ್ಟಿಯುಸಿ ಕೇರಳದಲ್ಲಿ ಪ್ರತ್ಯೇಕವಾಗಿ ಮುಷ್ಕರ ಹೂಡಲಿದೆ ಎಂದು ಸಂಘಟನೆಯ ರಾಜ್ಯ ಅಧ್ಯಕ್ಷ ಆರ್. ಚಂದ್ರಶೇಖರನ್ ತಿಳಿಸಿದ್ದಾರೆ. ಆದರೆ ಬಿಎಂಎಸ್ ನಾಳಿನ ಮುಷ್ಕರದಲ್ಲಿ ಭಾಗವಹಿಸದೇ ಇರುವ ತೀರ್ಮಾನ ಕೈಗೊಂಡಿದೆ.






