ಕಾಸರಗೋಡು: ಅನಧಿಕೃತವಾಗಿ ಮಣ್ಣು ಸಾಗಿಸಿದ ಹಿನ್ನೆಲೆಯಲ್ಲಿ ಅಪಾಯಕರ ಸ್ಥಿತಿಗೆ ತಲುಪಿದ ಜಿಲ್ಲೆಯ ಚೆಮ್ಮನಾಡು ಪಂಚಾಯತ್ನ ಕಳನಾಡುನಲ್ಲಿರುವ ಚಂದ್ರಗಿರಿ ಕೋಟೆಯನ್ನು ಸಂರಕ್ಷಿಸಲು ಜಿಲ್ಲಾ- ರಾಜ್ಯ ಆಡಳಿತ ಕೂಟಗಳು ಸಿದ್ಧವಾಗಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆಗ್ರಹಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಬಾಬುರಾಜ್, ಜಿಲ್ಲಾ ಕಾರ್ಯದರ್ಶಿ ಕೆ.ಟಿ. ಪುರುಷೋತ್ತಮನ್, ಜಿಲ್ಲಾ ಸಮಿತಿ ಸದಸ್ಯ ಶ್ರೀನಿವಾಸನ್, ಉದುಮ ಮಂಡಲ ಉಪಾಧ್ಯಕ್ಷ ಸದಾಶಿವನ್ ಮಣಿಯಂಗಾನ, ಕಾರ್ಯದರ್ಶಿ ಸೌಮ್ಯಾ ಪದ್ಮನಾಭನ್, ಕೋಶಾಧಿಕಾರಿ ರತೀಶ್ ವಿ.ಎ., ರಾಜೇಶ್ ಕೈಂದಾರ್, ಪ್ರಮೋದ್ ಕೀಳೂರು, ಹರೀಶ್ ಪಳ್ಳಿಪುರಂ ಎಂಬಿವರು ಸ್ಥಳ ಸಂದರ್ಶಿಸಿದ ಬಳಿಕ ಅಶ್ವಿನಿ ಈ ಹೇಳಿಕೆ ನೀಡಿದ್ದಾರೆ.
ಪ್ರವಾಸಿ ತಾಣವನ್ನಾಗಿ ಮಾಡಲು ಸಾಧ್ಯತೆ ಇರುವ ಚಂದ್ರಗಿರಿ ಕೋಟೆಯನ್ನು ಸಂರಕ್ಷಿಸುವುದರ ಬದಲು ಸ್ಥಳೀಯಾಡಳಿತ, ಜಿಲ್ಲಾ, ರಾಜ್ಯ ಆಡಳಿತ ಮೌನ ವಹಿಸಿರುವುದಾಗಿ ಅವರು ಆರೋಪಿಸಿದರು. ಚಂದ್ರಗಿರಿ ಕೋಟೆಗೆ ಅಪಾಯವುಂಟಾಗುವ ರೀತಿಯಲ್ಲಿ ನೂರಾರು ಲೋಡ್ ಮಣ್ಣು ಸಾಗಿಸಿಯೂ ಸಮೀಪದಲ್ಲೇ ಇರುವ ಕಳನಾಡು ವಿಲ್ಲೇಜ್ ಕಚೇರಿಯ ಅಧಿಕಾರಿಗಳು ಮೌನ ಪಾಲಿಸಿರುವುದಾಗಿಯೂ ಅಶ್ವಿನಿ ಆರೋಪಿಸಿದರು.







