ಕಾಸರಗೋಡು: ಪಿಲಿಕುಂಜೆ ಶ್ರೀ ಐವರ್ ಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ಕ್ಕೆ ನಾಡಿನ ವಿವಿಧ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ಭಕ್ತರು ತಲುಪಿ ದೈವಗಳ ದರ್ಶನ ಪಡೆಯುತ್ತಿದ್ದಾರೆ. ಈ ತಿಂಗಳ 22ರಂದು ಕಳಿಯಾಟ ಮಹೋತ್ಸವ ಕಾರ್ಯಕ್ರಮಗಳು ಆರಂಭಗೊಂಡಿದ್ದು, 27ರ ವರೆಗೆ ಮುಂದುವರಿಯಲಿದೆ. ಇಂದು ಮುಂಜಾನೆ 4.30ಕ್ಕೆ ಆಯಿರತ್ತಿರಿ ದೀಪೋತ್ಸವ ಆರಂಭಗೊಂಡಿದ್ದು, ಶ್ರೀ ಪುಳ್ಳಿ ಕರಿಂಗಾಳಿ ಯಮ್ಮನವರ ದರ್ಶನ, ತುಲಾಭಾರ, ಕಾರ್ಯಕಾರನ್ ದೈವ (ಆಲಿದೈವ), ಕಾಳಪುಲಿಯನ್, ಪುಲಿಕಂಡನ್ ದೈವಗಳ ಆಗಮನ, ಪುಲಿಕಂಡನ್ ದೈವ ಕೊಲ್ಲಂಪಾಡಿ ದೈವರ ಸನ್ನಿಧಿಗೆ ಭೇಟಿ ನಡೆಯಿತು. ಅನಂತರ ಮಂತ್ರಮೂರ್ತಿ ದೈವ ದರ್ಶನ ಆರಂಭಗೊಂಡಿತು. ಮಧ್ಯಾಹ್ನ 2.30ಕ್ಕೆ ವೇಟ ಕ್ಕೊರುಮಗನ್ ದೈವ, ಪುಲ್ಲೂರ್ಣನ್ ದೈವ, ಸಂಜೆ ೫ಕ್ಕೆ ಪುಲ್ಲೂರಾಳಿ ದೈವ, 5.30ಕ್ಕೆ ವಿಷ್ಣುಮೂರ್ತಿ ದೈವದರ್ಶನ ನಡೆಯಲಿದೆ. ರಾತ್ರಿ 8 ಗಂಟೆಗೆ ಕಾಸರಗೋಡು ಯುವಜನ ಸಂಘದ ಆಶ್ರಯದಲ್ಲಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿರುವುದು. ನಾಳೆ ಬೆಳಿಗ್ಗೆ 7 ಗಂಟೆಗೆ ಕಾರ್ಯಕಾರನ್ (ಆಲಿದೈವ), ಬಳಿಕ ಮಧ್ಯಾಹ್ನ 12ಕ್ಕೆ ಮೂರನೇ ಕಳಿಯಾಟ ಆರಂಭಗೊಳ್ಳಲಿದೆ.






