ಕುಂಬಳೆ: ಅಕ್ರಮವಾಗಿ ಹೊಯ್ಗೆ ಸಾಗಾಟದ ಬಗ್ಗೆ ಪೊಲೀಸರಿಗೆ ಗುಪ್ತ ಮಾಹಿತಿ ನೀಡಿದ ಶಂಕೆಯ ಹೆಸರಲ್ಲಿ ತಂಡವೊಂದು ಯುವಕನಿಗೆ ಹಲ್ಲೆ ನಡೆಸಿದ ದೂರಿನಂತೆ ಮೂವರ ವಿರುದ್ಧ ಕುಂಬಳೆ ಪೊಲೀಸರು ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೊಗ್ರಾಲ್ ಮುಸ್ಲಿಂ ಲೀಗ್ ಕಚೇರಿ ಬಳಿಯ ಬೈತುಲ್ ಸುರೂಲ್ ನಿವಾಸಿ ಅಬ್ದುಲ್ಲ ಅರ್ಶಾದ್ (35) ಎಂಬವರು ನೀಡಿದ ದೂರಿನಂತೆ ಮೊಗ್ರಾಲ್ ನಿವಾಸಿಗಳಾದ ಗಫೂರ್, ತನ್ಸೀಫ್ ಮತ್ತು ಸನದ್ ಎಂಬವರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ.
ಅಕ್ರಮ ಹೊಯ್ಗೆ ಸಾಗಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಶಂಕೆಯಿಂದ ಅಕ್ರಮಿಗಳ ತಂಡ ನಿನ್ನೆ ಸಂಜೆ ಮೊಗ್ರಾಲ್ ಪುತ್ತೂರು ಗ್ರಾಮದಲ್ಲಿರುವ ತನ್ನ ಮನೆಗೆ ಅಕ್ರಮವಾಗಿ ನುಗ್ಗಿ ಬಂದು ತನ್ನ ಎದೆಗೆ ಗುದ್ದಿ ಹಾಗೂ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು ಉಸಿರುಗಟ್ಟಿಸಿದರೆಂದೂ, ಬೊಬ್ಬೆ ಕೇಳಿದ ತಾಯಿ ಅಲ್ಲಿಗೆ ಓಡಿ ಬಂದಾಗ ಅಕ್ರಮಿಗಳು ಅಲ್ಲಿಂದ ಪರಾರಿಯಾದರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅಬ್ದುಲ್ಲ ಅರ್ಶಾದ್ ಆರೋಪಿಸಿದ್ದಾರೆ. ಆರೋಪಿಗಳ ಪತ್ತೆಗಾಗಿರುವ ಕಾರ್ಯಾಚರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.






