ಕುಂಬಳೆ: ಬೇಸಿಗೆ ಬಿಸಿಯಲ್ಲಿ ಸಮುದ್ರತೀರ ವಲಯ ಬರದತ್ತ ಸಾಗುತ್ತಿದೆ. ಮೀನುಕಾರ್ಮಿಕರು ಇಷ್ಟರ ಮಟ್ಟಿಗೆ ಬರಕ್ಕೆ ತುತ್ತಾದ, ಸಂದಿಗ್ದತೆಗೀಡಾದ ಕಾಲ ಇರಲಿಲ್ಲವೆಂದು ಮೀನು ಕಾರ್ಮಿಕರು ತಿಳಿಸುತ್ತಾರೆ. ಕಳೆದ ವರ್ಷದ ಮಳೆಗಾಲ, ಟ್ರೋಲಿಂಗ್ ನಿಷೇಧ ಎಲ್ಲ ಮುಗಿದು ಸಮುದ್ರಕ್ಕೆ ತೆರಳಿದ ಮೀನು ಕಾರ್ಮಿಕರು ನಿರಾಶೆಹೊಂದಿದ್ದರು. ಮೀನಿನ ಲಭ್ಯತೆಯ ಕೊರತೆ, ಕಡಲಬ್ಬರ, ಅಸಹನೀಯವಾದ ಬಿಸಿಯಿಂದ ಮೀನು ಸಂಪತ್ತು ನಾಶವಾದ ಹಿನ್ನೆಲೆಯಲ್ಲಿ ಈ ವರ್ಷ ಸಮುದ್ರತೀರ ನಿವಾಸಿಗಳು ಉಪವಾಸದಲ್ಲಿದ್ದಾರೆ. ಮೀನುಗಾರಿಕೆ ಯನ್ನು ಕೈಬಿಡುವ ಸನ್ನಿವೇಶ ಪ್ರಸ್ತುತ ಇದೆ ಎಂದು ಪರಂಪರಾಗತ ಮೀನುಕಾರ್ಮಿಕರು ನುಡಿಯುತ್ತಾರೆ. ಸಮುದ್ರದಲ್ಲಿ ಬಿಸಿ ಹೆಚ್ಚಾದಾಗ ತೀರ ಪ್ರದೇಶದಿಂದ ಆಳ ಸಮುದ್ರಗಳಿಗೆ ಮೀನುಗಳು ತೆರಳುತ್ತವೆ ಎಂದು ಮೀನುಕಾರ್ಮಿಕರು ನುಡಿಯುತ್ತಾರೆ.
ಇದರಿಂದ ದೋಣಿಗಳಲ್ಲಿ ಪರಂಪರಾಗತವಾಗಿ ಮೀನುಗಾರಿಕೆ ನಡೆಸುವವರು ಸಂಕಷ್ಟಕ್ಕೀಡಾಗುತ್ತಾರೆ. ಇಂಜಿನ್ ಅಳವಡಿಸಿದ ದೋಣಿಗಳಲ್ಲಿ ತೆರಳುವ ಮೀನು ಕಾರ್ಮಿಕರು ಮೀನಿನ ದೌರ್ಲಭ್ಯದ ಹಿನ್ನೆಲೆಯಲ್ಲಿ ಕಡಲಿಗೆ ಹೋಗದ ಸ್ಥಿತಿಗೆ ತಲುಪಿದ್ದಾರೆ. ಧಾರಾಳ ಮೀನು ಲಭಿಸಬೇಕಾದ ಸಮಯದಲ್ಲಿ ಕೂಡಾ ಬಂಗುಡೆ, ಭೂತಾಯಿ ಮೊದಲಾದ ಮೀನುಗಳು ಲಭಿಸದ ಸನ್ನಿವೇಶ ಪ್ರಸ್ತುತ ಇದೆ ಎಂದು ಮೀನು ಕಾರ್ಮಿಕರು ನುಡಿಯು ತ್ತಾರೆ. ಕಷ್ಟ ಪಟ್ಟು ಸಮುದ್ರಕ್ಕೆ ತೆರಳಿದರೂ ಇಂಧನ ವೆಚ್ಚಕ್ಕಾಗು ವಷ್ಟು ಮೀನು ಕೂಡಾ ಲಭಿಸದ ಸ್ಥಿತಿ ಇದೆ ಎಂದು ಅವರು ನುಡಿಯು ತ್ತಾರೆ. ಈ ತಿಂಗಳು ಕೊನೆಗೊಂಡರೆ ಮತ್ತೆ ಮಳೆಗಾಲ ಆರಂಭವಾಗಲಿದೆ. ಜೊತೆಗೆ ಟ್ರೋಲಿಂಗ್ಗೆ ನಿಷೇಧ ಹೇರಲಾಗುವುದು. ಲಕ್ಷಾಂತರ ರೂ. ಸಾಲ ತೆಗೆದು ಮೀನುಗಾರಿಕೆಯಲ್ಲಿ ಏರ್ಪಟ್ಟವರು ಏನು ಮಾಡಬೇಕೆಂದು ತಿಳಿಯದೆ ಸಂದಿಗ್ಧತೆಯಲ್ಲಿರುವುದಾಗಿ ಮೀನು ಕಾರ್ಮಿಕರು ತಿಳಿಸುತ್ತಾರೆ.






