ಬದಿಯಡ್ಕ: ನಿರಂತರ ಜನರ ಪ್ರತಿಭಟನೆ, ಬೇಡಿಕೆ ಉಂಟಾಗಿದ್ದರೂ ಯಾವುದೇ ಫಲವಿಲ್ಲದ ಚೆರ್ಕಳ- ಅಡ್ಕಸ್ಥಳ ರಸ್ತೆ ಈಗ ಸಂಚಾರಕ್ಕೆ ಅಯೋಗ್ಯವಾದ ಸ್ಥಿತಿಗೆ ತಲುಪಿದೆ. ಈ ರಸ್ತೆಯ ಪಳ್ಳತ್ತಡ್ಕದಲ್ಲಿ ಬೃಹತ್ ಹೊಂಡ ಸೃಷ್ಟಿಯಾಗಿ ವಾಹನಗಳಿಗೆ ಸಂಚಕಾರ ಉಂಟುಮಾಡುತ್ತಿದೆ. ಚೆರ್ಕಳ- ಅಡ್ಕಸ್ಥಳ ರಸ್ತೆ ದುರಸ್ತಿಗೊಳಿ ಸಬೇಕೆಂದು ವಿವಿಧ ರಾಜಕೀಯ ಪಕ್ಷಗಳು, ವಿವಿಧ ಸಂಘಸಂಸ್ಥೆಗಳು ಹಲವು ಬಾರಿ ಹೋರಾಟ ನಡೆಸಿದ್ದವು. ಆದರೆ ಶಾಸಕರಿಂದಾಗಲೀ, ಲೋಕೋ ಪಯೋಗಿ ಇಲಾಖೆಯಿಂದಾಗಲೀ ಸೂಕ್ತ ಕ್ರಮ ಇದುವರೆಗೂ ಉಂಟಾಗಲಿಲ್ಲ.
ರಸ್ತೆ ದುರಸ್ತಿಗೆ ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಈ ಬಗ್ಗೆ ಹೆಚ್ಚಿನ ಮಾಹಿತಿ ಇದುವರೆಗೂ ಬಹಿರಂಗಗೊಂಡಿಲ್ಲ. ಕರ್ನಾಟಕವನ್ನು ಸಂಪರ್ಕಿಸುವ ಪ್ರಧಾನ ರಸ್ತೆ ಇದಾಗಿದ್ದು, ವಿಟ್ಲ, ಪುತ್ತೂರು, ಧರ್ಮಸ್ಥಳ ಕ್ಷೇತ್ರ ಸಹಿತ ವಿವಿಧ ಪ್ರದೇಶಗಳಿಗೆ ಈ ರಸ್ತೆ ಮೂಲಕ ಸಂಚರಿಸಬೇಕಾಗಿದೆ. ನಿನ್ನೆ ಬೇಸಿಗೆ ಮಳೆ ಸುರಿದ ಹಿನ್ನೆಲೆಯಲ್ಲಿ ಹೊಂಡದಲ್ಲಿ ನೀರು ತುಂಬಿಕೊಂಡು ಪಳ್ಳತ್ತಡ್ಕ ಕೆಸರುಗದ್ದೆಯಾಗಿ ಬದಲಾಗಿದೆ. ರಸ್ತೆಯ ದುರಸ್ತಿ ಶೀಘ್ರ ನಡೆಸಿ ಸುಗಮ ಸಂಚಾರ ಯಾವಾಗ ಸಾಧ್ಯವಾಗಬಹುದೆಂಬ ಬಗ್ಗೆ ಸಾರ್ವಜನಿಕರು ಈಗ ಪ್ರಶ್ನಿಸುತ್ತಿದ್ದಾರೆ.






