ಕಾಸರಗೋಡು: ಆಟೋರಿಕ್ಷಾ ಪ್ರಯಾಣದರ ಹೆಚ್ಚಿಸಬೇಕು, ಪೆಟ್ರೋಲ್ ಉತ್ಪನ್ನಗಳನ್ನು ಸಬ್ಸಿಡಿ ದರದಲ್ಲಿ ಆಟೋ ಕಾರ್ಮಿಕರಿಗೆ ವಿತರಿಸಬೇಕು, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿಯಲ್ಲಿ ಸೇರಿಸಲು ಕೇರಳ ಶಿಫಾರಸು ಮಾಡಬೇಕು, ಪೆಟ್ರೋಲಿಯಂ ಉತ್ಪನ್ನಗಳಿಗೆ ರಾಜ್ಯ ಹೇರಿದ ಹೆಚ್ಚುವರಿ ತೆರಿಗೆಯನ್ನು ಕಡಿತಗೊಳಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ಕಾಸರಗೋಡು ಜಿಲ್ಲಾ ಆಟೋರಿಕ್ಷಾ ಮಜ್ದೂರ್ ಸಂಘ್ (ಬಿಎಂಎಸ್) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡು ತಾಲೂಕು ಕಚೇರಿಗೆ ಮಾರ್ಚ್ ಹಾಗೂ ಧರಣಿ ನಡೆಸಲಾಯಿತು. ಯೂನಿಯನ್ ಜಿಲ್ಲಾ ಅಧ್ಯಕ್ಷ ಶಿವರಾಮರ ಅಧ್ಯಕ್ಷತೆಯಲ್ಲಿ ನಡೆದ ಧರಣಿಯನ್ನು ಆಟೋರಿಕ್ಷಾ ಮಜ್ದೂರ್ ಸಂಘ್ನ ಜಿಲ್ಲಾ ಕಾರ್ಯದರ್ಶಿ ಭರತ್ ಕಲ್ಯಾಣ್ ರೋಡ್ ಉದ್ಘಾಟಿಸಿದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಶುಭಾಶಂಸನೆ ಗೈದರು.
ಬಿಎಂಎಸ್ ಜಿಲ್ಲಾ ಜತೆ ಕಾರ್ಯದರ್ಶಿ ಭಾಸ್ಕರ ಪೊಯಿನಾಚಿ, ಕಾಸರಗೋಡು ವಲಯ ಕಾರ್ಯದರ್ಶಿ ಬಾಬು ಮೋನ್ ಚೆಂಗಳ, ಆಟೋರಿಕ್ಷಾ ಮಜ್ದೂರ್ ಸಂಘ್ ಜಿಲ್ಲಾ ಉಪಾಧ್ಯಕ್ಷರಾದ ಎ. ಕೇಶವ, ಎಸ್.ಕೆ. ಉಮೇಶ್, ದಿವಾಕರ ರೈ ಕುಂಬಳೆ, ಕಮಲಾಕ್ಷ ಉಪ್ಪಳ, ಶ್ರೀಧರ ಹೊಸಂಗಡಿ ಮಾತನಾಡಿದರು.
ಆಟೋರಿಕ್ಷಾ ಮಜ್ದೂರ್ ಸಂಘದ ಜಿಲ್ಲಾ ಕೋಶಾಧಿಕಾರಿ ವಿಶ್ವನಾಥ ಶೆಟ್ಟಿ ಸ್ವಾಗತಿಸಿ, ಉಪಾಧ್ಯಕ್ಷ ಕುಂಞಿಕಣ್ಣನ್ ವಂದಿಸಿದರು.







