ಕಾಸರಗೋಡು: ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯನ್ನು ದೂಡಿಹಾಕಿ ಆಕೆಯ ಕುತ್ತಿಗೆಯಿಂದ ಮೂರು ಪವನ್ನ ಚಿನ್ನದ ಸರ ಎಗರಿಸಿ ಪರಾರಿಯಾದ ಇಬ್ಬರು ಆರೋಪಿಗಳನ್ನು ಹೊಸದುರ್ಗ ಪೊಲೀಸ್ ಇನ್ಸ್ಪೆಕ್ಟರ್ ಕೆ. ದಿನೇಶ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಕೊಯಿಲಾಂಡಿ ಮಾವಿಲೆಕಂಡಿ ಹೌಸ್ನ ಸೂರ್ಯನ್ (26), ತಾಮರಶ್ಶೇರಿ ಅಡಿವಾರಂ ಮುಪ್ಪದೇಕರ್ ಹೌಸ್ನ ಅನಸ್ ಯಾನೆ ರಂಬೂಟನ್ ಅನಸ್ (29) ಎಂಬಿವರು ಬಂಧಿತ ಆರೋಪಿಗಳಾಗಿ ದ್ದಾರೆ. ಮಟ್ಟನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಈ ಇಬ್ಬರು ಆರೋಪಿಗಳು ಇದೇ ರೀತಿಯ ಕೃತ್ಯ ನಡೆಸಿದ್ದರು. ಅದಕ್ಕೆ ಸಂಬಂಧಿಸಿ ಮಟ್ಟನ್ನೂರು ಪೊಲೀಸರು ಇವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಯುವತಿಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ವಿಷಯ ಬೆಳಕಿಗೆ ಬಂದಿತ್ತು. ಇದರಂತೆ ಹೊಸದುರ್ಗ ಪೊಲೀಸರು ಮಟ್ಟನ್ನೂರಿಗೆ ತೆರಳಿ ಆರೋಪಿಗಳ ಬಂಧನ ದಾಖಲಿಸಿದ್ದಾರೆ. ಹೊಸದುರ್ಗ ಸಮೀಪದ ಮಾವುಂಗಾಲ್ ನೆಲ್ಲಿತ್ತರ ಪುಲಿಯನಡ್ಕದ ಪಿ.ಸಿಂಧು ಎಂಬಾಕೆ ಇತ್ತೀಚೆಗೆ ಹೊಸದುರ್ಗದಿಂದ ದ್ವಿಚಕ್ರವಾಹನದಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಅವರನ್ನು ಈ ಇಬ್ಬರು ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿ ದಾರಿ ಮಧ್ಯೆ ಮಾವುಂಗಾಲ್ನಲ್ಲಿ ತಡೆದು ನಿಲ್ಲಿಸಿ ಸಿಂಧು ಅವರನ್ನು ಸ್ಕೂಟರ್ನಿಂದ ದೂಡಿ ಹಾಕಿದ ಬಳಿಕ ಅವರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದರು. ಆರೋಪಿಗಳು ಅಲ್ಲಿಂದ ಮಂಗಳೂರು ಭಾಗಕ್ಕೆ ಸಾಗಿದ್ದು ದಾರಿ ಮಧ್ಯೆ ತಮ್ಮ ವಾಹನವನ್ನು ಉಪೇಕ್ಷಿಸಿದ್ದರು. ಆರೋಪಿಗಳು ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನದಲ್ಲಿ ಸಂಚರಿಸಿ ಇದೇ ರೀತಿಯ ಕಳವು ನಡೆಸುತ್ತಿದ್ದರೆಂದೂ ಆದ್ದರಿಂದ ಅವರನ್ನು ಗುರುತುಹಚ್ಚಲು ಕಷ್ಟಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗಾಗಿ ಪೊಲೀಸರು 229 ಸಿಸಿಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲಿಸಿದ್ದರು. ಈ ವೇಳೆ ಆರೋಪಿಗಳ ದೃಶ್ಯಪತ್ತೆಯಾ ಗಿತ್ತು.ಆರೋಪಿಗಳು ಇತ್ತೀಚೆಗೆ ಕಲ್ಲಿಕೋಟೆಯ ಹೋಟೆಲೊಂದಕ್ಕೆ ತೆರಳಿ ಹೆಲ್ಮೆಟ್ ತೆಗೆದು ಚಹಾ ಕುಡಿಯುತ್ತಿದ್ದ ದೃಶ್ಯ ಅಲ್ಲಿನ ಸಿಸಿ ಟಿವಿಯಲ್ಲಿ ಪತ್ತೆಯಾಗಿತ್ತು. ಅದರ ಜಾಡು ಹಿಡಿದು ಪೊಲೀಸರು ನಡೆಸಿದ ಶೋಧದಲ್ಲಿ ಮೊದಲು ಅನಸ್ನನ್ನು ಬಂಧಿಸಿದ್ದರು. ಅನಂತರ ಆತನನ್ನು ವಿಚಾರಣೆಗೊಳಪಡಿಸಿದಾಗ ಇನ್ನೋರ್ವ ಆರೋಪಿ ಸೂರ್ಯನ ಬಗ್ಗೆ ಮಾಹಿತಿ ಲಭಿಸಿತ್ತು. ಇದರಂತೆ ಪೊಲೀಸರು ಆತನನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ಅನುಮತಿಯೊಂದಿಗೆ ಮತ್ತೆ ಕಸ್ಟಡಿಗೆ ತೆಗೆದು ಸಮಗ್ರ ತನಿಖೆಗೊಳ ಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.






