ಬದಿಯಡ್ಕ: ಕನ್ಯಪ್ಪಾಡಿಯಲ್ಲಿ ಅಂಗಡಿಯ ಮುಂದೆ ಮಲಗಿದ್ದ ಎರಡು ಹಸುಗಳನ್ನು ಕಳವುಗೈದು ಕಾರಿನಲ್ಲಿ ಸಾಗಿಸಿದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಬಂಧಿಸುವಲ್ಲಿ ಬದಿಯಡ್ಕ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಗಳೂರು ಜೋಕಟ್ಟೆಯ ಮುಹಮ್ಮದ್ ಅಶ್ಫಾಕ್ (30) ಎಂಬಾತನನ್ನು ಬದಿಯಡ್ಕ ಪೊಲೀಸ್ ಇನ್ಸ್ಪೆಕ್ಟರ್ ಆರ್.ಪಿ. ಅನೂಪ್ಕೃಷ್ಣನ್ ಹಾಗೂ ತಂಡ ಬಂಧಿಸಿದೆ. ಮತ್ತಿಬ್ಬರು ಆರೋಪಿಗಳಾದ ಜೋಕಟ್ಟೆಯ ರಾಸಿಕ್ (26), ಉಳ್ಳಾಲ ಅಳಿಕೆಯ ಮುಹಮ್ಮದ್ ಇರ್ಭಾಸ್ (25) ಎಂಬಿವರನ್ನು ಜುಲೈ 4ರಂದು ಬಂಧಿಸಲಾಗಿತ್ತು. ಜೂನ್ ೧೬ರಂದು ಮುಂಜಾನೆ 1 ಗಂಟೆ ವೇಳೆ ಕನ್ಯಪ್ಪಾಡಿ ರಹ್ಮತ್ ಮಂಜಿಲ್ನ ಕೆ.ಎಂ. ಮುಹಮ್ಮದ್ರ ಮನೆಯ ಮುಂದೆ ಅಂಗಡಿ ವರಾಂಡದಲ್ಲಿ ಮಲಗಿದ್ದ ಹಸುಗಳನ್ನು ಆರೋಪಿಗಳು ಕಳವು ನಡೆಸಿದ್ದರು. ಸಿ.ಸಿ ಟಿವಿ ಕ್ಯಾಮರಾಗಳಲ್ಲಿ ಸೆರೆಯಾದ ದೃಶ್ಯಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಲ್ಲಿ ಆರೋಪಿಗಳ ಮಾಹಿತಿ ಲಭ್ಯವಾಗಿತ್ತು. ಅದರ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕಳವಿಗೀಡಾದ ಹಸುಗಳಿಗೆ ಸುಮಾರು ೩೦,೦೦೦ ರೂಪಾಯಿ ಮೌಲ್ಯ ಅಂದಾಜಿಸಲಾಗುತ್ತಿದೆಯೆಂದು ಹೇಳಲಾಗುತ್ತಿದೆ. ಈ ಹಸುಗಳನ್ನು ಕಳವುಗೈದು ಆರೋಪಿಗಳು ಉಳ್ಳಾಲದ ಕಸಾಯಿಖಾನೆಯೊಂದಕ್ಕೆ ಮಾರಾಟಮಾಡಿರುವುದಾಗಿ ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ. ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡದಲ್ಲಿ ಎಎಸ್ಐ ಪ್ರಸಾದ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಗೋಕುಲ್, ಸಿವಿಲ್ ಪೊಲೀಸ್ ಆಫೀಸರ್ ಶ್ರೀನೇಶ್ ಎಂಬಿವರಿದ್ದರು.






