ಮೀಂಜ: ಮಂಗಲ್ಪಾಡಿ ಮೀಂಜ ಪಂಚಾಯತ್ಗಳನ್ನು ಜೋಡಿಸುವ ದೇರಂಬಳ ಸೇತುವೆಯನ್ನು ಕೂಡಲೇ ನಿರ್ಮಿಸಲಾಗುವುದೆಂದು ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ. ಕುಸಿದ ದೇರಂಬಳ ಸೇತುವೆ ಸಮೀಪದ ಜನಪ್ರತಿನಿಧಿಗಳು, ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಅವರು ಈ ವಿಷಯ ತಿಳಿಸಿದ್ದಾರೆ. ಮೂರು ವರ್ಷದ ಹಿಂದೆ ಸೇತುವೆ ಕುಸಿದಕೂಡಲೇ ಶಾಸಕರ ಮಧ್ಯಪ್ರವೇಶದಿಂದಾಗಿ ಮೈನರ್ ಇರಿಗೇಶನ್ ಇಲಾಖೆ ಹೊಸ ಸೇತುವೆಗಾಗಿ ಇನ್ವೆಸ್ಟಿಗೇಶನ್ ನಡೆಸಿತ್ತು. ಆದರೆ ಇದರ ಸಮೀಪದಲ್ಲೇ ಜಲಜೀವನ್ ಮಿಷನ್ ಯೋಜನೆಯಂಗವಾಗಿ ಮೇಜರ್ ಇರಿಗೇಶನ್ ಇಲಾಖೆ ಚೆಕ್ ಡ್ಯಾಂ ಸಹಿತದ ಸೇತುವೆ ನಿರ್ಮಿಸುವುದಾಗಿ ಉದ್ದೇಶಿಸಿರುವ ಹಿನ್ನೆಲೆಯಲ್ಲಿ ತಾಂತ್ರಿಕ ತಡೆಗಳು ಆ ವೇಳೆ ಉಂಟಾಗಿ ಫಂಡ್ ಲಭ್ಯ ವಾಗಿರಲಿಲ್ಲ. ಬಳಿಕ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ ಫಂಡ್ ಲಭ್ಯಗೊಳಿಸಲು ಪ್ರಯತ್ನಿಸ ಲಾಯಿತಾದರೂ ಕಳೆದ ಸರಕಾರದ ಸಮಯದಲ್ಲಿ ಲಭ್ಯವಾಗಿರಲಿಲ್ಲ ವೆಂದು ಶಾಸಕರು ತಿಳಿಸಿದ್ದಾರೆ.






