ಮಂಜೇಶ್ವರ: ಪ್ರವಾದಿ ಮುಹ ಮ್ಮದ್ ಪೈಗಂಬರ್ರವರ ಜನ್ಮದಿನ ವಾದ ‘ಈದ್ ಮಿಲಾದ್’ ಹಬ್ಬವನ್ನು ಮಂಜೇಶ್ವರ ತಾಲೂಕಿನಾದ್ಯಂತ ಮಂಗಳವಾರದAದು ಸಡಗರ ಹಾಗೂ ಧಾರ್ಮಿಕ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಉದ್ಯಾವರ ಸಾವಿರ ಜಮಾಯತ್ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ವಿಶೇಷ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಮಸೀದಿ ಅಧ್ಯಕ್ಷ ಯು.ಕೆ. ಸೈಪುಲ್ಲಾ ತಂಙಳ್, ಕಾರ್ಯದರ್ಶಿ ಇಬ್ರಾಹಿಂ ಬಟರ್ಫ್ಲೈ, ಎಸ್.ಎಂ. ಬಶೀರ್, ಇಬ್ರಾಹಿಂ ಉಮ್ಮರ್ ಹಾಜಿ ಸೇರಿದಂತೆ ಹಲವು ಗಣ್ಯರು ಹಾಗೂ ಧಾರ್ಮಿಕ ನೇತಾರರು ಮೆರವಣಿಗೆಗೆ ನೇತೃತ್ವ ವಹಿಸಿದರು. ಮದ್ರಸ ವಿದ್ಯಾರ್ಥಿಗಳು ಹಾಗೂ ಯುವಕರು ಸಾಂಪ್ರದಾಯಿಕ ಉಡುಪಿನಲ್ಲಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಸಾರ್ವಜನಿಕರಿಗೆ ಅಲ್ಲಲ್ಲಿ ಸಿಹಿ ಹಾಗೂ ಪಾನೀಯಗಳನ್ನು ವಿತರಿಸುವ ಮೂಲಕ ಪರಸ್ಪರ ಪ್ರೀತಿ-ವಿಶ್ವಾಸವನ್ನು ಹಂಚಿಕೊಳ್ಳಲಾಯಿತು. ಕುಂಜತ್ತೂರು, ಪೊಸೋಟು, ಬಂಗ್ರ ಮಂಜೇಶ್ವರ, ಉಪ್ಪಳ ಸೇರಿದಂತೆ ಮಂಜೇಶ್ವರ ತಾಲೂಕಿನ ವಿವಿಧ ಮೊಹಲ್ಲಾ ಹಾಗೂ ಮಸೀದಿಗಳ ವ್ಯಾಪ್ತಿಯಲ್ಲೂ ಈದ್ ಮಿಲಾದ್ ಆಚರಿಸಲಾಯಿತು. ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗಳು, ಉಪನ್ಯಾಸಗಳು ಜರುಗಿದವು.







