ಕುಂಬಳೆ: ಓಣಂ ಆಚರಣೆಗಾಗಿ ಊರಿಗೆ ತೆರಳಿದ್ದ ನಿವೃತ್ತ ಮುಖ್ಯೋ ಪಾಧ್ಯಾಯರ ಮನೆಗೆ ಕಳ್ಳರು ನುಗ್ಗಿ ಚಿನ್ನಾಭರಣ ದೋಚಿದ ಘಟನೆ ನಡೆದಿದೆ.
ಕುಂಬಳೆ ಕೃಷ್ಣನಗರದಲ್ಲಿ ವಾಸಿಸುವ ಕೊಡ್ಯಮ್ಮೆ ಜಿಎಚ್ ಎಸ್ಎಸ್ನ ನಿವೃತ್ತ ಮುಖ್ಯೋಪಾ ಧ್ಯಾಯ ಥೋಮಸ್ ಟಿ.ಜೆ ಅವರ ಮನೆಯಿಂದ ಕಳವು ನಡೆದಿದೆ. ಮನೆಯ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕೊಠಡಿಯೊಳಗೆ ಕಪಾಟಿನಿಂದ ಮುಕ್ಕಾಲುಪವನ್ನ ಬೆಂಡೋಲೆ ಹಾಗೂ ಅರ್ಧ ಪವನ್ನ ಉಂಗುರ ದೋಚಿದ್ದಾರೆ. ಥೋಮಸ್ ಟಿ.ಜೆ ಹಾಗೂ ಪತ್ನಿ ಸೋಫಿಯಮ್ಮ ( ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ ಮುಖ್ಯೋಪಾಧ್ಯಾಯಿನಿ) ಓಣಂ ಹಬ್ಬಾಚರಣೆಗಾಗಿ ಅಗೋಸ್ತ್ ೨೨ರಂದು ಕಣ್ಣೂರು ಆಲಕ್ಕೋಡ್ ನಲ್ಲಿರುವ ಸ್ವಂತ ಮನೆಗೆ ತೆರಳಿದ್ದರು. ಇಂದು ಬೆಳಿಗ್ಗೆ ಅವರು ಮನೆಗೆ ಮರಳಿ ತಲುಪಿದಾಗಲೇ ಕಳವು ನಡೆದ ವಿಷಯ ಅರಿವಿಗೆ ಬಂದಿದೆ. ಕಪಾಟನ್ನು ಚೆಲ್ಲಾಪಿಲ್ಲಿಗೊಳಿಸಿದ ಸ್ಥಿತಿಯಲ್ಲಿ ಕಂಡುಬಂದಿದೆ. ಕಪಾಟಿನಲ್ಲಿ ಹಣ ಇರಿಸಿದ್ದು, ಅದನ್ನು ಕಳ್ಳರಿಗೆ ದೋಚಲು ಸಾಧ್ಯವಾಗಲಿಲ್ಲ. ಕಳವು ಬಗ್ಗೆ ಲಭಿಸಿದ ಮಾಹಿತಿಯಂತೆ ಕುಂಬಳೆ ಪೊಲೀಸರು ಸಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ.






