ಮುಳ್ಳೇರಿಯ: ಜೀವ ಕೈಯಲ್ಲಿ ಹಿಡಿದು ಸಂಚರಿಸುವುದು ಎಂಬೊಂದು ಆಡು ಮಾತಿದೆ. ಈ ಮಾತು ಅಕ್ಷರಶಃ ನಿಜ ಅಂತ ಮಲ್ಲಾವರ ಕುಂಡಲ ಭಾಗದ ಜನರ ಸಂಚಾರ ಹಾದಿಯನ್ನು ನೋಡಿದರೆ ಹೇಳಬಹುದಾಗಿದೆ. ಈ ಪ್ರದೇಶದ ಜನರು ವಿವಿಧ ಅಗತ್ಯಗಳಿಗೆ ಆದೂರು ಪೇಟೆಗೆ ತಲುಪಬೇಕಿದ್ದರೆ ಕಲ್ಲಕಟ್ಟ (ಕಲ್ಲಚೆರ) ಎಂಬ ತೋಡಿನ ಬದಿಯಲ್ಲಿ ನಡೆದು ಹೋಗಬೇಕಾಗುತ್ತಿದೆ.
ಆದೂರಿನಲ್ಲಿ ಸರಕಾರಿ ಶಾಲೆ, ರೇಶನ್ ಅಂಗಡಿ, ಪೊಲೀಸ್ ಠಾಣೆ ಅಥವಾ ಇನ್ನಿತರ ಅಗತ್ಯಗಳಿಗೆ ಸಾಗಬೇಕಿದ್ದರೆ ಈ ಕಾಲುದಾರಿಯನ್ನು ಉಪಯೋಗಿಸಬೇಕಾಗುತ್ತಿದೆ. ಮಲ್ಲಾವರ, ಕುಂಡಲ, ನಾಮಂಗಾಲ್ ಎಂಬೆಡೆಗಳಿಂದ ದಿನನಿತ್ಯ ನೂರಾರು ಮಂದಿ ವಿವಿಧ ಅಗತ್ಯಗಳಿಗೆ ತೆರಳುತ್ತಿದ್ದಾರೆ. ಆದರೆ ಈ ತೋಡಿನ ಬದಿ ಈಗ ಎರಡೂ ಕಡೆಯಲ್ಲೂ ಕುಸಿದು ಬಿದ್ದಿದ್ದು ಇಲ್ಲಿ ನಡೆದಾಡಲು ಕಷ್ಟಕರವಾಗಿದೆ. ಎಲ್ಲಾದರೂ ಆಯತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ಕಾರಡ್ಕ ಪಂಚಾಯತ್ನ ಆರನೇ ವಾರ್ಡ್ ವ್ಯಾಪ್ತಿಯ ಈ ಪ್ರದೇಶದಲ್ಲ್ಲಿ ಜನರ ಮೂಲಭೂತ ಅಗತ್ಯವಾದ ಸಂಚಾರ ಸೌಲಭ್ಯವೇ ಇಲ್ಲದಂತಾಗುತ್ತಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಕೂಡಾ ಈ ಪ್ರದೇಶದ ಜನ ಹೆದರುತ್ತಿದ್ದಾರೆ. ಬದಿ ಕುಸಿದ ಸ್ಥಳದಲ್ಲಿ ಅಡಿಕೆ ಮರದ ತುಂಡನ್ನು ಹಾಕಿದ್ದರೂ ಕಾಲು ಜಾರಿದರೆ ತೋಡಿಗೆ ಬೀಳುವ ಸಾಧ್ಯತೆ ಬಹಳವಿದೆ. ಆದಷ್ಟು ಬೇಗನೆ ಈ ಸಮಸ್ಯೆಗೆ ಪರಿಹಾರ ಕಂಡು ಸ್ಥಳೀಯರ ಸಂಚಾರ ಭೀತಿಯನ್ನು ಇಲ್ಲದಂತೆ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.






