ಉಪ್ಪಳ: ಮೀಯಪದವು ಬಳಿಯ ಬಟ್ಯಪದವಿನಲ್ಲಿ ವ್ಯಾಪಾರಿಯನ್ನು ಹಾಡಹಗಲೇ ಅಂಗಡಿಗೆ ನುಗ್ಗಿ ಗುಂಡಿಕ್ಕಿ ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ಇನೋರ್ವ ಆರೋಪಿ ಸೆರೆಗೀಡಾಗಿ ದ್ದಾನೆ. ಮೀಯಪದವು ನಿವಾಸಿಯಾದ ರಹೀಂ (32) ಎಂಬಾತನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ನಿತಿನ್ರಾಜ್, ಎಎಸ್ಪಿ ಅಶೋಕ್ ಅಚ್ಯುತ್ ಎಂಬಿವರ ಮೇಲ್ನೋಟದಲ್ಲಿ ಮಂಜೇಶ್ವರ ಪೊಲೀಸ್ ಇನ್ಸ್ಪೆಕ್ಟರ್ ಎಂ.ವಿ. ವಿಷ್ಣುಪ್ರಸಾದ್ ಹಾಗೂ ತಂಡ ಸೆರೆಹಿಡಿದಿದೆ. ರಹೀಂ ವಿರುದ್ಧ ಕೇರಳ, ಕರ್ನಾಟಕ ರಾಜ್ಯಗಳಲ್ಲಾಗಿ 16 ಪ್ರಕರಣಗಳಿವೆಯೆಂದು ಪೊಲೀಸರು ತಿಳಿಸಿದ್ದಾರೆ. ವ್ಯಾಪಾರಿಗೆ ಗುಂಡಿಕ್ಕಿ ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯಾದ ಕುಳೂರು ಚಿಗುರುಪಾದೆ ಕುನ್ನಿಲ್ ಹೌಸ್ನ ಮುಹಮ್ಮದ್ ಸಫ್ವಾನ್ ಯಾನೆ ವೆಡಿ ಸಫ್ವಾನ್ (28) ಎಂಬಾತನನ್ನು ಇತ್ತೀಚೆಗೆ ಬಂಧಿಸಲಾಗಿತ್ತು.
ಅಗೋಸ್ತ್ 17ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಬಟ್ಯಪದವಿನಲ್ಲಿ ವ್ಯಾಪಾರಿಯಾಗಿರುವ ಶುಹೈಬ್ ಮೋಯಿನ್ ಶೇಕ್ (28) ಎಂಬವರ ಮೇಲೆ ಆರೋಪಿಗಳು ಗುಂಡು ಹಾರಿಸಿದ್ದರು. ಅಂದು ಮಧ್ಯಾಹ್ನ ಕಾರಿನಲ್ಲಿ ತಲುಪಿದ ತಂಡ ಅಂಗಡಿಗೆ ನುಗ್ಗಿ ಬೆದರಿಕೆಯೊಡ್ಡಿದ ಬಳಿಕ ಗುಂಡು ಹಾರಿಸಿದೆ. ಈ ಘಟನೆಗೆ ಸಂಬಂಧಿಸಿ ಖಾದರ್ ಮದಂಕಲ್ಲು, ಮೀಯಪದವು ರಹೀಂ, ಅಬೂಬಕ್ಕರ್ ಸಿದ್ದಿಕ್, ಮುಹಮ್ಮದ್ ಸಫ್ವಾನ್ ಎಂಬಿವರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ತಲೆಮರೆಸಿ ಕೊಂಡ ಇತರ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಂತೆ ರಹೀಂನ ಕಾರು ಮೊನ್ನೆ ರಾತ್ರಿ ಗುವೆದಪಡ್ಪುನಲ್ಲಿ ಬೇರೊಂದು ಕಾರಿಗೆ ಢಿಕ್ಕಿ ಹೊಡೆದಿತ್ತು. ಅಪಘಾತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಮಂಜೇಶ್ವರ ಪೊಲೀಸರು ಅಲ್ಲಿಗೆ ತಲುಪುತ್ತಿದ್ದಂತೆ ರಹೀಂ ಅಲ್ಲಿಂದ ಪರಾರಿಯಾಗಿದ್ದನು. ಆತ ಊರಿನಲ್ಲೇ ಇದ್ದಾನೆಂಬ ಮಾಹಿತಿ ಮೇರೆಗೆ ನಡೆಸಿದ ಶೋಧ ವೇಳೆ ನಿನ್ನೆ ಮೀಯಪದವಿನಿಂದ ಸೆರೆಹಿಡಿಯಲಾಗಿದೆ.
ಈತನ ಕಾರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿ ದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡದಲ್ಲಿ ಎಸ್ಐ ಶಬರೀಕೃಷ್ಣನ್,ಎಎಸ್ಐ ರಾಜೀವನ್, ಫಿಲಿಪ್ ಥೋಮಸ್ ಎಂಬಿವರಿದ್ದರು.






