ಕಾಸರಗೋಡು: ಮನೆ ಕೆಲಸ ನೀಡುವ ಭರವಸೆಯೊಡ್ಡಿ ಕರ್ನಾಟಕ ನಿವಾಸಿಯಾಗಿರುವ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಅಂಬಲತರ ಸಮೀಪದ ಇರಿಯಾ ನಿವಾಸಿ ಪಾರಮ್ಮಲ್ ಬಶೀರ್ (56) ಬಂಧಿತ ಆರೋಪಿ. ರಾಜಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎ ಸಂತೋಷ್ ಕುಮಾರ್ ನೇತೃತ್ವದ ಪೊಲೀಸರ ತಂಡ ಈತನನ್ನು ಅಂಬಲತರದಿಂದ ಬಂಧಿಸಿದೆ.
ಈ ಪ್ರಕರಣದ ಇನ್ನೋರ್ವ ಆರೋಪಿ ಪಳ್ಳಿಕೆರೆ ನಿವಾಸಿಗಾಗಿ ಶೋಧ ಕಾರ್ಯಾಚರಣೆಯನ್ನು ಪೊಲೀಸರು ಮುಂದುವರಿಸಿದ್ದಾರೆ. ಕರ್ನಾಟಕ ನಿವಾಸಿಯಾಗಿರುವ ಯುವತಿ ಯೋರ್ವೆಗೆ ಮನೆ ಕೆಲಸ ಕೊಡಿಸುವುದಾಗಿ ಆಕೆಯ ತಾಯಿಗೆ ತಿಳಿಸಿ ಆ ಮೂಲಕ ಯುವತಿಯನ್ನು ಅಂಬಲತರಕ್ಕೆ ಕರೆಸಿ ಅಲ್ಲಿನ ಮನೆಯೊಂದರಲ್ಲಿ ವಾಸಸೌಕರ್ಯ ಏರ್ಪಡಿಸಿ ಬಳಿಕ ಕಳೆದ ಜನವರಿ ಮತ್ತು ಮಾರ್ಚ್ ತಿಂಗಳಲ್ಲಾಗಿ ಆರೋಪಿ ಬಶೀರ್ ಲೈಂಗಿಕ ಕಿರುಕುಳ ನೀಡಿರುವುದಾಗಿ ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ. ಹೀಗೆ ಲೈಂಗಿಕ ಕಿರುಕುಳ ನೀಡಿದ ನಂತರ ಆರೋಪಿ ನನ್ನನ್ನು ಪಳ್ಳಿಕೆರೆ ನಿವಾಸಿಯೋರ್ವನಿಗೆ ಹಸ್ತಾಂತರಿಸಿ ದನೆಂದೂ ಆತನೂ ನನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಯುವತಿ ತಿಳಿಸಿದ್ದಾಳೆ.





