ಕಾಡಾನೆ ದಾಳಿಯ ಬೆನ್ನಲ್ಲೇ ಹುಲಿ ಪ್ರತ್ಯಕ್ಷ : ಜನತೆ ಆತಂಕದಲ್ಲಿ
ಕಾಸರಗೋಡು: ಮುಳಿಯಾರು, ಬೇಡಡ್ಕ ಪಂಚಾಯತ್ಗಳ ವಿವಿಧ ಭಾಗಗಳಲ್ಲಿ ಕಾಡಾನೆಯ ದಾಳಿ ತಡೆಯಲು ಸಾಧ್ಯವಾಗದೆ ಅರಣ್ಯ ಇಲಾಖೆ ಅಧಿಕಾರಿಗಳು ಸಂದಿಗ್ಧತೆಯಲ್ಲಿರುವಾಗಲೇ ಪಡ್ಪುನಲ್ಲಿ ಹುಲಿ ಕಂಡುಬಂದಿರುವುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ವ್ಯಾಪಕ ಪ್ರಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಪಡ್ಪು , ಬಂಡಂಕೈ ಪ್ರದೇಶಗಳಲ್ಲಿ ನಿನ್ನೆ ರಾತ್ರಿ ಹುಲಿ ಕಂಡುಬಂದಿರುವುದಾಗಿ ಹೇಳಲಾಗುತ್ತಿದೆ. ರಸ್ತೆಗೆ ಅಡ್ಡವಾಗಿ ಹುಲಿಯೊಂದು ಓಡುತ್ತಿರುವುದನ್ನು ಆಟೋ ಚಾಲಕನೋರ್ವ ಕಂಡಿರುವುದಾಗಿ ಹೇಳಲಾಗುತ್ತಿದೆ. ಹುಲಿ ಓಡುತ್ತಿರುವ ದೃಶ್ಯ ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಇದು ಜನರಲ್ಲಿ ಆತಂಕ ಹೆಚ್ಚಿಸಿದೆ.. ಆದರೆ ಹುಲಿ ಈ ಭಾಗಕ್ಕೆ ಬರುವ ಸಾಧ್ಯತೆ ಇಲ್ಲವೆಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಕಾಸರಗೋಡು ಜಿಲ್ಲೆಯ ಅರಣ್ಯದಲ್ಲಿ ಇದುವರೆಗೆ ಹುಲಿ ಪತ್ತೆಯಾದ ಬಗ್ಗೆ ವರದಿಯಾಗಿಲ್ಲ. ಆದ್ದರಿಂದ ಹುಲಿ ಕಂಡುಬಂದಿದೆಯೆಂಬ ಪ್ರಚಾರವನ್ನು ಒಪ್ಪಲು ಕಷ್ಟಸಾಧ್ಯ ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ.