ಬದಿಯಡ್ಕ: ಸ್ಥಳೀಯಾಡಳಿತ ಸಂಸ್ಥೆಗಳ ಅಭಿವೃದ್ಧಿ ಮೊತ್ತ ಕಡಿತಗೊಳಿಸಿದ, ರಾಜ್ಯ ಸರಕಾರದ ಜನವಿರುದ್ಧ ನೀತಿ ಆರೋಪಿಸಿ ಎಲ್ಡಿಎಫ್ ಬದಿಯಡ್ಕ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಪಂಚಾಯತ್ ಕಚೇರಿಗೆ ಪ್ರತಿಭಟನಾ ಮಾರ್ಚ್ ನಡೆಸಲಾಯಿತು. ಸಿಪಿಎಂ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕೆ.ಆರ್. ಜಯಾನಂದ ಉದ್ಘಾಟಿಸಿದರು. ಸಿಪಿಐ ಬದಿಯಡ್ಕ ಲೋಕಲ್ ಕಾರ್ಯದರ್ಶಿ ಸುಧಾಕರ ವಿದ್ಯಾಗಿರಿ ಅಧ್ಯಕ್ಷತೆ ವಹಿಸಿದರು. ಕುಂಬಳೆ ಏರಿಯಾ ಸಮಿತಿ ಸದಸ್ಯ ಪಿ. ರಂಜಿತ್ ಸ್ವಾಗತಿಸಿದರು.
ರಾಜ್ಯದಲ್ಲಿ ಯುಡಿಎಫ್ ಅಧಿಕಾರಕ್ಕೇರಿದ ಬಳಿಕ ಮಹಿಳಾ ಸುರಕ್ಷಾ ಪಿಂಚಣಿ ವಿತರಣೆ ಮೊಟಕುಗೊಂಡಿದ್ದು, ತೀವ್ರ ಮಳೆಗೆ ವಿವಿಧ ಜಿಲ್ಲೆಗಳಲ್ಲಿ ನೆರೆ, ಗುಡ್ಡೆ ಕುಸಿತದಿಂದ ಜನರು ಸಂಕಷ್ಟ ಅನುಭವಿಸುವಾಗ ಸರಕಾರ ಫಲಪ್ರದ ಮಧ್ಯಪ್ರವೇಶ ನಡೆಸುತ್ತಿಲ್ಲವೆಂದು ಧರಣಿಯಲ್ಲಿ ಮಾತನಾಡಿದ ಮುಖಂಡರು ಆರೋಪಿಸಿದರು. ಪಂಚಾಯತ್ ಸದಸ್ಯೆ ಅನ್ನತ್ ವಿ.ಬಿ., ಚಂದ್ರಶೇಖರ ಶೆಟ್ಟಿ, ಪ್ರಕಾಶ್ ಅಮ್ಮಣ್ಣಾಯ, ಬಿ. ಶೋಭ, ಕೆ. ಶಾರದ, ಎಂ.ಎಸ್. ಶ್ರೀಕಾಂತ್, ಬಿ.ಎಂ. ಸುಬೈರ್, ಎಂ. ಮದನನ್ ಭಾಗವಹಿಸಿದರು.






