ಉಪ್ಪಳ: ವರ್ಕಾಡಿಯಲ್ಲಿ ಕೋಳಿ ಅಂಕದಲ್ಲಿ ನಿರತರಾಗಿದ್ದ ಐದು ಮಂದಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿ ೧೪ ಸಾವಿರ ರೂಪಾಯಿ ಹಾಗೂ ಒಂದು ಕೋಳಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಿನ್ನೆ ಮಧ್ಯಾಹ್ನ 12.30ರ ವೇಳೆ ವರ್ಕಾಡಿ ಬಾಲಿಗುರಿ ಬೋಳ ಸೈಂಟ್ ಲೋರೆನ್ಸ್ ಚರ್ಚ್ ಸಮೀಪದ ಖಾಲಿ ಹಿತ್ತಿಲಲ್ಲಿ ಜನರು ಗುಂಪುಗೂಡಿರುವುದನ್ನು ಕಂಡು ಪೊಲೀಸರು ಅಲ್ಲಿಗೆ ತಲುಪಿದ್ದರು. ಈ ವೇಳೆ ಅಲ್ಲಿಂದ ಹಲವರು ಓಡಿ ಪರಾರಿಯಾಗಿದ್ದಾರೆ. ಸ್ಥಳದಿಂದ ತಲಪ್ಪಾಡಿ ದೇವಿಪುರದ ಮಹೇಶ್ ಶೆಟ್ಟಿ (4೦), ಮಂಜೇಶ್ವರ ಕಡಂಬಾರ್ನ ಮನೋಜ್ (45), ಬಂಟ್ವಾಳದ ವಿನ್ಸೆಂಟ್ ಡಿ’ಸೋಜಾ (65), ಬಂಟ್ವಾಳ ಬಿಮೂಡದ ಇರ್ಫಾನ್ (34), ಕಡಂಬಾರ್ ಹೆದ್ದಾರಿಯ ಕಿರಣ್ಕುಮಾರ್ (42) ಎಂಬಿವರನ್ನು ಸೆರೆಹಿಡಿಯಲಾಗಿದೆ. ಎಸ್ಐ ವಿಷ್ಣು ಎಸ್ ನಾಯರ್, ಎಸ್ಐ ಟ್ರೈನಿ ಅರ್ಜುನ್ ಅರವಿಂದ್, ಸಿಪಿಒಗಳಾದ ಸಜಿತ್, ಸನೂಪ್, ಚಾಲಕ ಸಜೀಶ್ ಎಂಬಿವರು ಕಾರ್ಯಾಚರಣೆ ತಂಡದಲ್ಲಿದ್ದರು.



