ಉಚಿತ ಪ್ರಯಾಣ: ಖಾಸಗಿ ಬಸ್‌ಗಳ ಸಂಕಷ್ಟ ಬಗ್ಗೆ  ಅಧ್ಯಯನ ನಡೆಸಲು ಸಮಿತಿ ರಚನೆ

ತಿರುವನಂತಪುರ: ಕೆಎಸ್‌ಆರ್‌ಟಿಸಿ  ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಿರುವು ದರಿಂದ ಖಾಸಗಿ ಬಸ್‌ಗಳು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಅಧ್ಯಯನ ನಡೆಸಲು ರಾಜ್ಯ ಸರಕಾರ ತಜ್ಞರ ಸಮಿತಿಗೆ ರೂಪು ನೀಡಿದೆ.

ಮಾಜಿ ಸಾರಿಗೆ ಆಯುಕ್ತ ಕೆ. ಪದ್ಮಕುಮಾರ್‌ರನ್ನು  ಸಮಿತಿಯ ಅಧ್ಯಕ್ಷರಾಗಿ ನೇಮಿಸಲಾಗಿದೆ. ನಾಟ್‌ಪಾಕ್‌ನ ಮಾಜಿ ನಿರ್ದೇಶಕಿ ಬಿ.ಜಿ. ಶ್ರೀದೇವಿ, ಸಾರಿಗೆ ಇಲಾಖೆ ಯ ಹೆಚ್ಚುವರಿ ಕಾರ್ಯದರ್ಶಿ ಕೆ.ಎಸ್. ವಿಜಯಶ್ರೀ, ಜಂಟಿ ಸಾರಿಗೆ ಆಯುಕ್ತ ಕೆ. ಮನೋಜ್ ಕುಮಾರ್ ಮತ್ತು ನಾಟ್‌ಪಾಕ್ ವಿಜ್ಞಾನಿ ಡಾ. ಸಂಜಯ್ ಎಂಬಿವರನ್ನು ಸಮಿತಿಯ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ. ಆಯಾ ತಿಂಗಳ ರಸ್ತೆ ತೆರಿಗೆಯನ್ನು ಆಯಾ ತಿಂಗಳಲ್ಲೇ ಪಾವತಿಸಲು ಸೌಕರ್ಯ ಏರ್ಪಡಿಸಲಾ ಗುವುದು, ಖಾಸಗಿ ಬಸ್‌ಗಳಲ್ಲಿ  ಶುಲ್ಕ ವಸೂಲಿ ಮಾಡದೆ ಜಾಹೀರಾತು ಪ್ರದರ್ಶಿಸುವ ಅನುಮತಿ ನೀಡಲಾಗು ವುದು, ಖಾಸಗಿ ಬಸ್‌ಗಳು ಎದುರಿಸು ತ್ತಿರುವ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳುವುದಾಗಿ ಖಾಸಗಿ  ಬಸ್ ಮಾಲಕರ ಸಂಘಟನೆಗಳ ಪ್ರತಿನಿಧಿ ಗಳೊಂದಿಗೆ ತಿರುವನಂತಪುರದಲ್ಲಿ ಸಾರಿಗೆ ಸಚಿವ ಸಿ.ಪಿ. ಜೋನ್ ನಿನ್ನೆ ನಡೆಸಿದ ಚರ್ಚೆಯಲ್ಲಿ ಭರವಸೆ ನೀಡಲಾಗಿದೆ.

ಖಾಸಗಿ ಬಸ್‌ಗಳ ಪ್ರಯಾಣದರ ಹೆಚ್ಚಿಸಬೇಕೆಂಬ ಬೇಡಿಕೆಯನ್ನು  ಸಂಘಟನೆಗಳ ಪ್ರತಿನಿಧಿಗಳು ಸಚಿವರ ಮುಂದಿರಿಸಿದ್ದಾರೆ. ಖಾಸಗಿ ಬಸ್‌ಗಳ ಪ್ರಯಾಣ ದರವನ್ನು  ನಾಲ್ಕೂವರೆ ವರ್ಷಗಳ ಹಿಂದೆ ಪರಿಷ್ಕರಿಸಲಾಗಿತ್ತು. ಬಳಿಕ ಇಂಧನ ಮತ್ತು ವಾಹನಗಳ ಬಿಡಿಭಾಗಗಳ ದರದಲ್ಲಿ ಭಾರೀ ಹೆಚ್ಚಳಉಂಟಾಗಿದೆ. ಆದ್ದರಿಂದ ಅದಕ್ಕೆ ಹೊಂದಿಕೊಂಡು ಪ್ರಯಾಣ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಬಸ್ ಮಾಲಕರು ಆಗ್ರಹ ಪಟ್ಟಿದ್ದಾರೆ. ವಿದ್ಯಾರ್ಥಿಗಳ ಪ್ರಯಾಣ ದರ ಹೆಚ್ಚಿಸುವ ವಿಷಯದಲ್ಲಿ ವಿದ್ಯಾರ್ಥಿ ಸಂಘಟನೆಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಕೆಎಸ್‌ಆರ್‌ಟಿಸಿ ಬಸ್‌ಗಳ ಜತೆಗೆ ಸಂಚರಿಸುವ ಖಾಸಗಿ ಬಸ್‌ಗಳ ಸಮಯವನ್ನು ಮರುಕ್ರಮೀಕರಿಸುವ ತೀರ್ಮಾನವನ್ನೂ ಸಭೆಯಲ್ಲಿ ಕೈಗೊಳ್ಳಲಾಯಿತು.

You cannot copy contents of this page