ಎಟಿಎಂ ಕೌಂಟರ್‌ನ ಗಾಜು ದೇಹದ ಮೇಲೆ ಬಿದ್ದು ಮೃತಪಟ್ಟ ಬ್ಯಾಂಕ್ ನೌಕರನ ಮೃತದೇಹ  ಅಂತ್ಯಸಂಸ್ಕಾರ

ಕಾಸರಗೋಡು:  ಎಟಿಎಂ ಕೌಂಟರ್‌ನ ಗಾಜು ದೇಹದ ಮೇಲೆ ಬಿದ್ದು ಮೃತಪಟ್ಟ ಬ್ಯಾಂಕ್ ನೌಕರನ ಮೃತದೇಹವನ್ನು ಕಾಞಂಗಾಡ್‌ನ ಮನೆಗೆ ತಲುಪಿಸಿ ಅಂತ್ಯಸಂಸ್ಕಾರ ನಡೆಸಲಾಯಿತು. ಕಾಞಂಗಾಡ್ ಶ್ರೀ ನಿತ್ಯಾನಂದ ಆಶ್ರಮ ಸಮೀಪದ  ಬಾಲಕೃಷ್ಣನ್ (56) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕರ್ನಾಟಕದ ಕೋ-ಆಪರೇಟಿವ್  ಬ್ಯಾಂಕ್‌ನ ಮಂಗಳೂರು ಶಾಖೆಯಲ್ಲಿ ಇವರು ಅಟೆಂಡರ್ ಆಗಿದ್ದರು. ವಾರದಲ್ಲಿ ಒಂದು ದಿನ ಮಾತ್ರವೇ  ಕಾಞಂಗಾಡ್‌ನ ಮನೆಗೆ ಬರುತ್ತಿದ್ದ ಇವರು ಇತರ ದಿನಗಳಲ್ಲಿ ಮಂಗಳೂರಿನಲ್ಲಿ ವಾಸಿಸುತ್ತಿದ್ದರು. ಮೊನ್ನೆ ಕೆಲಸ ಮುಗಿದ ಬಳಿಕ ಬ್ಯಾಂಕ್‌ನ ಸಮೀಪದ ಎಟಿಎಂ ಕೌಂಟರ್‌ಗೆ ಬಾಲಕೃಷ್ಣನ್ ತೆರಳಿದ್ದರೆನ್ನಲಾಗಿದೆ. ಈ ವೇಳೆ ಕಾಲು ಜಾರಿ ಬಿದ್ದಿದ್ದು ಈ ಮಧ್ಯೆ ಕೌಂಟರ್‌ನ ಗಾಜು ಅವರ ದೇಹದ ಮೇಲೆ  ಬಿದ್ದು ದುರ್ಘಟನೆ ಸಂಭವಿಸಿರುವುದಾಗಿ  ತಿಳಿದುಬಂದಿದೆ.  ದೀರ್ಘ ಹೊತ್ತಿನ ಬಳಿಕ ಎಟಿಎಂ ಕೌಂಟರ್‌ಗೆ ಬಂದ ವ್ಯಕ್ತಿಗಳು ಬಾಲಕೃಷ್ಣನ್ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ಕೂಡಲೇ ವೆನ್ಲಾಕ್ ಆಸ್ಪತ್ರೆಗೆ ತಲುಪಿಸಿದರೂ  ಚಿಕಿತ್ಸೆ ಮಧ್ಯೆ  ಸಾವು ಸಂಭವಿಸಿದೆ.  ಕಾಞಂಗಾಡ್ ಶ್ರೀ ನಿತ್ಯಾನಂದ ಆಶ್ರಮ ಸಮೀಪದ ದಿವಂಗತರಾದ ದಾಮೋದರನ್-ಸರೋಜಿನಿ ದಂಪತಿಯ ಪುತ್ರನಾದ ಮೃತರು ಪತ್ನಿ ಭಾರತಿ, ಪುತ್ರಿ ಶ್ರದ್ಧಾ, ಸಹೋದರರಾದ ದಿನಕರನ್, ಬಾಲಚಂದ್ರನ್ (ಈ ಇಬ್ಬರು ಮಂಗಳೂರಿನಲ್ಲಿ ಬ್ಯಾಂಕ್ ನೌಕರರು),  ಚಂದ್ರಹಾಸ (ಗಲ್ಫ್) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page