ಮಂಜೇಶ್ವರ: ಮಂಜೇಶ್ವರದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿರುವ ಮೂರು ದಿನಗಳ ‘ಹಲಸು ಹಣ್ಣಿನ ಮೇಳ’ಕ್ಕೆ ನಿನ್ನೆ ಮಂಜೇಶ್ವರ ಮೆಜೆಸ್ಟಿಕ್ ಮ್ಯಾನರ್ (ಕಲಾ ಸ್ಪರ್ಶಂ) ಸಭಾಂಗಣದಲ್ಲಿ ಚಾಲನೆ ದೊರೆಯಿತು. ಮಂಜೇಶ್ವರ ಪಂಚಾಯತ್ನ ಮಾಜಿ ಅಧ್ಯಕ್ಷೆ ಜೀನ್ ಲವಿನಾ ಮೊಂತೆರೋ ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡಿ ಹಲಸು ಬೆಳೆಗಾರರು ಗ್ರಾಹಕರಿಗೆ ನೇರವಾಗಿ ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭ ಪಡೆಯಲು ಹಲಸು ಮೇಳ ಕಾರ್ಯಕ್ರಮದ ಆಯೋಜನೆಯಾಗಿವೆ. ಅದರ ಜೊತೆ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. ರೈತರು ತಾವು ಬೆಳದಂತಹ ಹಲಸನ್ನು ಸಗಟು ಮಾರಾಟಗಾರರಿಗೆ ಅಲ್ಪ ಮೊತ್ತಕ್ಕೆ ಮಾರಾಟ ಮಾಡಿ ಆರ್ಥಿಕ ನಷ್ಠವನ್ನು ಹೊಂದುತ್ತಿದ್ದರು. ಇವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹಲಸು, ಮಾವು ಸೇರಿದಂತೆ ಮತ್ತಿತರ ಉತ್ಪನ್ನಗಳ ಮೇಳಗಳನ್ನು ಬೆನಕ ಇವೆಂಟ್ ನವರು ಮಂಜೇಶ್ವರದಲ್ಲಿ ನಡೆಸುತ್ತಿದ್ದಾರೆ. ಇನ್ನು ಎರಡು ದಿನಗಳ ತನಕ ಮೇಳ ನಡೆಯಲಿದ್ದು, ಸಾರ್ವಜನಿಕರು ಇಂತಹ ಮೇಳಗಳ ಲಾಭಪಡೆದು ಕೊಳ್ಳಬೇಕು ಎಂದರು. ಮಾರಾಟ ಮಳಿಗೆಯನ್ನು ವಾರ್ಡ್ ಸದಸ್ಯ ಅಬ್ದುಲ್ಲಾ ಗುಡ್ಡಕ್ಕೇರಿ ಉದ್ಘಾಟಿಸಿದರು. ಮಂಜೇಶ್ವರ ಪಂಚಾಯತ್ ಜನಪ್ರತಿನಿಧಿಗಳಾದ ರತ್ನಾಕರ ಮಂಜೇಶ್ವರ, ಜಯಂತಿ ಕಾಜೂರು, ಪ್ರಕಾಶ್ ಕೀರ್ತೇಶ್ವರ, ಮಾಜಿ ಸದಸ್ಯರಾದ ಸಿದ್ದೀಖ್ ಕನಿಲ, ರಾಜೇಶ್ ಮಜಾಲ್, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮಂಜೇಶ್ವರ ಘಟಕದ ಅಧ್ಯಕ್ಷÀ ಬಶೀರ್ ಕನಿಲ, ಹಲಸು ಮೇಳ ಆಯೋಜಕ, ಪತ್ರಕರ್ತ ರತನ್ ಕುಮಾರ್ ಹೊಸಂಗಡಿ, ಕೀರ್ತನ್ ಕಡಂಬಾರ್, ಸಂದೇಶ ಪುತ್ರನ್ ಕುಂದಾಪುರ , ಭಾಸ್ಕರ ಪೂಜಾರಿ ಕುಂದಾಪುರ, ನಾರಾಯಣ ಚೆಂಬಲ್ತಿಮಾರ್, ಅಚ್ಚುತ ಚೇವಾರ್, ಉಪಸ್ಥಿತರಿದ್ದರು. ರತನ್ ಕುಮಾರ್ ಹೊಸಂಗಡಿ ಸ್ವಾಗತಿಸಿ, ಬೆನಕ ಇವೆಂಟ್ಸ್ ಕುಂದಾಪುರದ ಗಣೇಶ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಮೇಳದ ಆಯೋಜಕÀ ಕೀರ್ತನ್ ಕೆ ಕಡಂಬಾರ್ ವಂದಿಸಿದರು. ಮೇಳದಲ್ಲಿ ಹಲಸಿನ ಹಣ್ಣಿನ ಅಪ್ಪ, ಜಿಲೇಬಿ, ಹೋಳಿಗೆ, ಕಬಾಬ್, ಮಂಚೂರಿ ಮತ್ತು ಬಿರಿಯಾನಿಯಂತಹ ವೈವಿಧ್ಯಮಯ ತಿನಿಸುಗಳನ್ನು ಸ್ಥಳದಲ್ಲೇ ಸಿದ್ಧಪಡಿಸಿ ಗ್ರಾಹಕರಿಗೆ ಬಡಿಸಲಾಗುತ್ತಿದೆ. ತುಮಕೂರು ಮತ್ತು ಪಾಂಡಿಚೇರಿಯ ಚಂದ್ರ ಹಲಸು ಸೇರಿದಂತೆ ವಿವಿಧ ತಳಿಯ ಹಣ್ಣುಗಳು, ಬೆಂಗಳೂರು ಮತ್ತು ರಾಮನಗರದ ಹತ್ತು ಬಗೆಯ ವಿಶೇಷ ಮಾವಿನ ಹಣ್ಣುಗಳು ಮೇಳದ ಆಕರ್ಷಣೆಯಾಗಿದೆ.
ಮೇಳದಲ್ಲಿ ಇಳಕಲ್ ಮತ್ತು ಮೈಸೂರು ಸಿಲ್ಕ್ ಸೀರೆಗಳು, ಚನ್ನಪಟ್ಟಣದ ಬೊಂಬೆಗಳು, ಮಣ್ಣಿನ ಆಭರಣಗಳು, ಬೇಲೂರಿನ ಶಿಲಾಮೂರ್ತಿಗಳು ಹಾಗೂ ಆಯುರ್ವೇದ ಉತ್ಪನ್ನಗಳ ಮಳಿಗೆಗಳು ಸಿದ್ಧವಾಗಿವೆ. ಜೊತೆಗೆ, ತೋಟಗಾರಿಕಾ ಆಸಕ್ತರಿಗೆ ವಿವಿಧ ಹಣ್ಣಿನ ಗಿಡಗಳು, ತರಕಾರಿ ಬೀಜಗಳು ಮತ್ತು ಹೂವಿನ ಗಿಡಗಳೂ ಲಭ್ಯವಿವೆ. ಮೇಳಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಒಂದು ಉಚಿತ ಹಲಸಿನ ಜಿಲೇಬಿ ನೀಡಲಾಗುತ್ತಿದೆ. ಜತೆಗೆ, ಸೆಲ್ಫಿ ಸ್ಟ್ಯಾಂಡ್ನಲ್ಲಿ ಫೋಟೋ ತೆಗೆದು ವಾಟ್ಸಾಪ್ ಸ್ಟೇಟಸ್ ಹಾಕುವವರಿಗೆ ಸದ್ಗುರು ಆಯುರ್ವೇದ ಸಾಬೂನು ಉಚಿತವಾಗಿ ನೀಡಲಾಗುತ್ತಿದೆ. ಸಾರ್ವಜನಿಕರು ತಮ್ಮಲ್ಲಿರುವ ಹಳೆಯ ಜರಿ ರೇಷ್ಮೆ ಸೀರೆಗಳನ್ನು ಇಲ್ಲಿ ನೀಡಿ ಹಣ ಪಡೆಯುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಮೇಳ ನಾಳೆ ರಾತ್ರಿ ತನಕ ಮುಂದುವರಿಯಲಿದೆ.






