ಕಾಸರಗೋಡು: ಪರಿವಾರ ಬಂಟರ ಸಂಘ ಕಾಸರಗೋಡು ವಲಯದ ಯುವ ವೇದಿಕೆ ಹಾಗೂ ಮಹಿಳಾ ವೇದಿಕೆ ವತಿಯಿಂದ ಅಮೈ ಬಯಲಿನಲ್ಲಿ ಪಂಚವಾರ್ಷಿಕ ಕೆಸರು ಗದ್ದೆ ಕ್ರೀಡೋತ್ಸವ ಆಚರಿಸಲಾಯಿತು. ವಿಶ್ವ ಪರಿವಾರ ಬಂಟರ ಸಂಘದ ಉಪಾದ್ಯಕ್ಷ ರಘುವೀರ ನಾಯ್ಕ ಉದ್ಘಾಟಿಸಿ, ಗ್ರಾಮೀಣ ಆಟೋಟ ಸ್ಪರ್ಧೆ ಮತ್ತು ಕೆಸರುಗದ್ದೆ ಕ್ರೀಡೋತ್ಸವ ನಮ್ಮ ಹಿಂದಿನ ಜನಾಂಗದವರಿಗೆ ವಿನೋದವಾಗಿತ್ತು. ಗದ್ದೆಯ ಕೆಸರು ಮನುಷ್ಯ ಶರೀರವನ್ನು ರೋಗ ರುಜಿನುಗಳಿಂದ ಕಾಪಾಡುವುದು ಎಂದರು. ಪ್ರೊಫೆಸರ್ ಡಾ. ಜಯಪ್ರಕಾಶ ನಾಯ್ಕರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಬೀರಂತಬೈಲು ಸಂತಾನ ಗುರಿಕ್ಕಾರ ಕೃಷ್ಣ ನಾಯ್ಕ, ಹಿರಿಯ ಸದಸ್ಯೆ, ಮಹಿಳಾ ವೇದಿಕೆ ಮಾಜಿ ಅಧ್ಯಕ್ಷೆ ರತ್ನಕಲಾ ನಾಯ್ಕ, ಕಾಸರಗೋಡು ವಲಯದ ಕಾರ್ಯ ದರ್ಶಿ ಯೋಗೀಶ ನಾಯ್ಕ, ಮಹಿಳಾ ವೇದಿಕೆ ಅಧ್ಯಕ್ಷೆ ಶಕೀಲಾ ಅಶೋಕ ನಾಯ್ಕ ಉಪಸ್ಧಿತರಿದ್ದರು. ವಿವಿಧ ಆಟೋಟ ಸ್ಪರ್ದೆಗಳನ್ನು ಆಯೋಜಿಸ ಲಾಯಿತು. ಕಾಸರಗೋಡು ವಲಯದ ಐನೂರಕ್ಕೂ ಮಿಕ್ಕ ಪರಿವಾರ ಬಂಟ ಬಂಧುಗಳು ಭಾಗವಹಿಸಿ ಯಶಸ್ವಿಗೊಳಿಸಿದರು. ಕಿಶನ್ ಕುಮಾರ ನಾಯ್ಕ ಅಮೈ ಸ್ವಾಗತಿಸಿ, ಯುವ ವೇದಿಕೆ ಅಧ್ಯಕ್ಷ ಶ್ರೀನಿವಾಸ ನಾಯ್ಕ ಕೊರುವೈಲು ವಂದಿಸಿದರು.






