ಕುಂಬಳೆ: ಕುಂಬಳೆ-ಮುಳ್ಳೇರಿಯ ಕೆಎಸ್ಟಿಪಿ ರಸ್ತೆಯ ವಿವಿಧೆಡೆ ಸ್ಥಾಪಿಸಿರುವ ಬೀದಿ ದೀಪಗಳಲ್ಲಿ ಹಲವು ಉರಿಯುತ್ತಿಲ್ಲ ಎಂಬ ಆರೋಪ ಹಲವು ಕಾಲದಿಂದ ಕೇಳಿ ಬರುತ್ತಿದ್ದರೂ ಅದಕ್ಕೆ ಪರಿಹಾರ ಕ್ರಮ ಕೈಗೊಳ್ಳುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಕುಂಬಳೆ ಪೇಟೆಯಲ್ಲಿ ಕುಂಬಳೆ ಸರ್ಕಲ್ನಿಂದ ಅನಿಲ್ ಕುಂಬ್ಳೆ ರಸ್ತೆಯಲ್ಲಿರುವ ಒಟ್ಟು ೧೬ ಕಂಬಗಳಲ್ಲಿ ಬೀದಿ ದೀಪಗಳು ಸ್ಥಾಪಿಸಲಾಗಿದೆ. ಈ ಪೈಕಿ ೮ ಕಂಬಗಳಲ್ಲಿರುವ ಬೀದಿ ದೀಪಗಳು ಹಲವು ತಿಂಗಳಿಂದ ಉರಿಯುತ್ತಿಲ್ಲ. ಇದರಿಂದ ಇಷ್ಟು ಭಾಗದಲ್ಲಿ ರಾತ್ರಿ ಹೊತ್ತು ಕತ್ತಲೆ ಆವರಿಸಿ ಕೊಂಡಿರುತ್ತದೆ. ಕುಂಬಳೆಯಲ್ಲಿ ಬಸ್ ಇಳಿದು ಅನಿಲ್ ಕುಂಬ್ಳೆ ರಸ್ತೆ ಯತ್ತ ತೆರಳುವವರಿಗೆ ಇದರಿಂದ ಸಮಸ್ಯೆ ಎದುರಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಾಣಬೇಕೆಂದು ಈ ಭಾಗದ ಜನತೆ ಹಲವು ಬಾರಿ ಪಂಚಾಯತ್ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಆದರೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದೆ ನಿರ್ಲಕ್ಷ್ಯ ನೀತಿ ಅನುಸರಿಸುತ್ತಿದ್ದಾರೆಂದು ನಾಗರಿಕರು ಆರೋಪಿಸುತ್ತಿದ್ದಾರೆ.






