ಪೈವಳಿಕೆ: ಚಿತ್ತಾರಿ ಚಾವಡಿಯಿಂದ ಬೋಳಂಗಳ ದೈವಸ್ಥಾನಕ್ಕೆ ಭಂಡಾರ ತೆರಳುವ ದಾರಿಯಲ್ಲಿ ಕಲ್ಲುಕಟ್ಟಿ ತಡೆ ಸೃಷ್ಟಿಸಿದ ಬಗ್ಗೆ ವಿಭಾಗೀಯ ಕಂದಾಯ ಅಧಿಕಾರಿಗೆ ನೀಡಿದ ದೂರಿನಲ್ಲಿ ಯಾವುದೇ ಕ್ರಮ ಉಂಟಾಗಿಲ್ಲವೆಂದು ದೂರುದಾರರಾದ ಪೈವಳಿಕೆ ಚಿತ್ತಾರಿ ಚಾವಡಿಯ ಯಜಮಾನ, ಮೆನೇಜಿಂಗ್ ಟ್ರಸ್ಟಿ ಪಿ. ರಂಗತ್ರೈ ಬಲ್ಲಾಳ ಅರಸರು ಆರೋಪಿಸಿದ್ದಾರೆ. ಕಳೆದ ಫೆಬ್ರವರಿ 9, 10ರಂದು ನಡೆದ ದೈವನೇಮಕ್ಕಾಗಿ ಚಿತ್ತಾರಿ ಚಾವಡಿಯಿಂದ ಭಂಡಾರ ತೆರಳುವ ವೇಳೆ ದಾರಿಯಲ್ಲಿ ತಡೆ ಸೃಷ್ಟಿಸಿದ ಬಗ್ಗೆ ವ್ಯಕ್ತಿಯೋರ್ವನ ವಿರುದ್ಧ ಕಾಸರಗೋಡು ಆರ್ಡಿಒರಿಗೆ ದೂರು ನೀಡಲಾಗಿತ್ತು. ಸುಮಾರು 800 ವರ್ಷಗಳಿಂದಲೂ ಇದೇ ದಾರಿಯಾಗಿ ದೈವದ ಭಂಡಾರ ತೆರಳಿ ಹಿಂತಿರುಗುತ್ತಿದ್ದು, ಕಳೆದ ಬಾರಿ ದಾರಿಗೆ ಕಲ್ಲು ಇರಿಸಿ ತಡೆ ಸೃಷ್ಟಿಸಲಾಗಿದೆ. ಈ ಬಗ್ಗೆ ರಂಗತ್ರೈ ಬಲ್ಲಾಳ ಅರಸರು ದೂರು ನೀಡಿದ್ದರು. ಆದರೆ ದೂರಿನಲ್ಲಿ ಯಾವುದೇ ಕ್ರಮ ಉಂಟಾಗಲಿಲ್ಲ. ಈ ಬಗ್ಗೆ ಆರ್ಡಿಒ ಶೀಘ್ರ ಕ್ರಮ ಕೈಗೊಂಡು ಭಂಡಾರ ತೆರಳಲು ಹಾದಿ ಸುಗಮಗೊಳಿಸಿ ಕೊಡಬೇಕೆಂದು ಅವರು ಆಗ್ರಹಿಸಿ ದ್ದಾರೆ. ಎಲ್ಲಾ ವಿಭಾಗದವರು ಸೌಹಾರ್ದತೆಯಿಂದಿರುವ ಪೈವಳಿಕೆಯಲ್ಲಿ ವ್ಯಕ್ತಿಯೋರ್ವನ ಧೋರಣೆಯಿಂದ ಧಾರ್ಮಿಕ ಕಾರ್ಯಗಳಿಗೆ ತೊಡಕಾಗಬಾ ರದೆಂದು ಅವರು ತಿಳಿಸಿದ್ದಾರೆ.
ಅಲ್ಲದೆ ದಾರಿಗೆ ತಡೆಯೊಡ್ಡಿದ ಸ್ಥಳದಲ್ಲಿ ಬಯಲಿಗೆ ಮಣ್ಣು ತುಂಬಿಸಿ ಪ್ಲೋಟ್ಗಳಾಗಿ ಮಾಡಿ ಮನೆ ಕಟ್ಟಿ ಮಾರಾಟ ಮಾಡಲು ಯತ್ನಿಸ ಲಾಗುತ್ತಿದೆಯೆಂದು ದೂರಿನಲ್ಲಿ ತಿಳಿಸಲಾ ಗಿದ್ದು, ಇದರಿಂದ ಮಳೆ ನೀರು ಹರಿಯುವ ಚರಂಡಿಗಳಿಗೆ ತೊಡಕಾಗುತ್ತಿದೆಯೆಂದು ವಿವರಿಸ ಲಾಗಿದೆ. ಗದ್ದೆಗಳಿಗೆ ಮಣ್ಣು ಹಾಕಿ ಮನೆ ನಿರ್ಮಾಣ ಮಾಡುವುದರಿಂದ ಪ್ರದೇಶದಲ್ಲಿ ನೀರಿನ ಸಮಸ್ಯೆಯೂ ಉಂಟಾಗಬಹುದೆಂದು ದೂರಿನಲ್ಲಿ ಸೂಚಿಸಲಾಗಿದೆ.






