ಕಚೇರಿ ಉದ್ಘಾಟನೆ ಪಕ್ಷದ ಬಲವರ್ಧನೆಗೆ ಪೂರಕ-ಅಶ್ವಿನಿ ಎಂ.ಎಲ್.: ನೀರ್ಚಾಲಿನಲ್ಲಿ ಭಾಜಪ ಬದಿಯಡ್ಕ ಪಶ್ಚಿಮ ವಲಯ ಕಚೇರಿ ಉದ್ಘಾಟನೆ

ಬದಿಯಡ್ಕ: ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿರುವ ಬದಿಯಡ್ಕ ಪಂಚಾಯತ್‌ನ ಪಶ್ಚಿಮ ವಲಯದಲ್ಲಿ ಕಾರ್ಯಾಲಯದ ಅಗತ್ಯತೆಯನ್ನು ಮನಗಂಡು ನೀರ್ಚಾಲಿನ ಹೃದಯ ಭಾಗದಲ್ಲಿ ಪಕ್ಷದ ಕಚೇರಿಯನ್ನು ತೆರೆದಿರುವುದು ನಮ್ಮ ಬಲವರ್ಧನೆಗೆ ಪೂರಕವಾಗಲಿದೆ. ಮುಂದಿನ ಚುನಾವಣೆಯಲ್ಲಿ ಪಂಚಾಯತ್‌ನ ಆಡಳಿತ ಭಾರತೀಯ ಜನತಾಪಕ್ಷದ್ದು ಆಗಬೇಕು. ಇದಕ್ಕಾಗಿ ಕಾರ್ಯಕರ್ತರು ಒಗ್ಗಟ್ಟಿನಿಂದ ಮುಂದುವರಿದು ತಳಮಟ್ಟದಲ್ಲಿ ಪ್ರತೀಮನೆಯನ್ನು ಸಂಪರ್ಕಿಸಬೇಕು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್. ಹೇಳಿದರು.
ನೀರ್ಚಾಲಿನಲ್ಲಿ ಭಾರತೀಯ ಜನತಾ ಪಕ್ಷದ ಬದಿಯಡ್ಕ ಪಂಚಾಯತ್ ಪಶ್ಚಿಮ ವಲಯ ಚುನಾವಣಾ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಸ್ಲಿಂಲೀಗ್ ಆಡಳಿತವು ಬದಿಯಡ್ಕ ಪಂಚಾಯತ್‌ಗೆ ಶಾಪವಾಗಿ ಪರಿಣಮಿಸಿದೆ. ಅಭಿವೃದ್ಧಿ ಕಾರ್ಯಗಳು ನಡೆಯದೆ ಜನರಿಗೆ ಲಭಿಸಬೇಕಾದ ಸವಲತ್ತುಗಳು ನಷ್ಟವಾಗಿದೆ. ಉದ್ಯೋಗಸ್ಥರಿಲ್ಲದ ಪಂಚಾಯತ್ ಕಚೇರಿಯಲ್ಲಿ ತಮ್ಮ ಅಗತ್ಯತೆಗಳಿಗಾಗಿ ಜನರು ಅಲೆದಾಡುವಂತಾಗಿದೆ. ಆದುದರಿಂದ ಬದಿಯಡ್ಕದ ಆಡಳಿತವನ್ನು ಪಡೆದು ನಾಡಿನ ಅಭಿವೃದ್ಧಿಯಲ್ಲಿ ನಮ್ಮ ಕೊಡುಗೆಯನ್ನು ನೀಡಬೇಕು ಎಂದರು.
ಬಿಜೆಪಿ ಬದಿಯಡ್ಕ ಪಶ್ಚಿಮ ವಲಯ ಸಮಿತಿ ಅಧ್ಯಕ್ಷ ಮಹೇಶ್ ವಳಕ್ಕುಂಜ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರ್ಯಕರ್ತರು ಸಂಘಟಿತರಾಗುತ್ತಿರುವುದು ಪಕ್ಷಕ್ಕೆ ಬಲವನ್ನು ತಂದಿದೆ. ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಕಾರ್ಯಕರ್ತರು ಜೊತೆಗೂಡಬೇಕಾಗಿ ಕರೆಯಿತ್ತರು. ಪಶ್ಚಿಮ ವಲಯ ನೂತನ ಸಮಿತಿಯನ್ನು ಘೋಷಿಸಿದರು.
ಬಿಜೆಪಿ ಕಲ್ಲಿಕೋಟೆ ವಲಯ ಪ್ರಧಾನ ಕಾರ್ಯದರ್ಶಿ ಎಂ ಸುಧಾಮ ಗೋಸಾಡ, ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ, ರಾಜ್ಯ ಸಮಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಜಿಲ್ಲಾ ಉಪಾಧ್ಯಕ್ಷ ಶಂಕರ ಡಿ., ಮುರಳೀಧರ ಯಾದವ್ ನಾಯ್ಕಾಪು, ಜಿಲ್ಲಾ ಕಾರ್ಯದರ್ಶಿ ಅಶ್ವಿನಿ ಮೊಳೆಯಾರು, ಜಿಲ್ಲಾ ಸಮಿತಿ ಜಾಲತಾಣ ಪ್ರಮುಖ ಸುಕುಮಾರ ಕುದ್ರೆಪ್ಪಾಡಿ, ಮಂಡಲ ಪ್ರಮುಖರಾದ ರವೀಂದ್ರ ರೈ ಗೋಸಾಡ, ಅವಿನಾಶ್ ರೈ ಬದಿಯಡ್ಕ, ಜಯಂತಿ ಕುಂಟಿಕಾನ, ರಾಮಕೃಷ್ಣ ಹೆಬ್ಬಾರ್, ಬಾಲಗೋಪಾಲ ಏಣಿಯರ್ಪು, ಮಂಡಲ ಕೋಶಾದಿsಕಾರಿ ಎಂ.ನಾರಾಯಣ ಭಟ್, ಜನಪ್ರತಿನಿದಿsಗಳು, ಪರಿವಾರ ಸಂಘಟನೆಯ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ವಲಯ ಸಮಿತಿ ಉಪಾಧ್ಯಕ್ಷ ಮಧುಚಂದ್ರ ಮಾನ್ಯ ಸ್ವಾಗತಿಸಿ, ಮಂಡಲ ಕಾರ್ಯದರ್ಶಿ ರಜನಿ ಸಂದೀಪ್ ವಂದಿಸಿದರು.

RELATED NEWS

You cannot copy contents of this page