ಬೆಳ್ಳೂರು: ನೆಟ್ಟಣಿಗೆ ಸರಕಾರಿ ಶಾಲೆಯ ಬಳಿ ಆತಂಕ ಸೃಷ್ಟಿಸಿದ್ದ ಅಪಾಯಕಾರಿ ಮರಗಳನ್ನು ತೆರವುಗೊಳಿಸಲಾಯಿತು. ಶಾಲಾ ತರಗತಿ ಕೊಠಡಿಗಳಿಗೆ ಹಾಗೂ ಅಡುಗೆ ಕೋಣೆ ಹತ್ತಿರದಲ್ಲೇ ಇದ್ದ ಒಣಗಿದ ಬೃಹತ್ ಮೂರು ಅಕೇಶಿಯಾ ಮರಗಳನ್ನು ತೆರವುಗೊಳಿಸಲಾಗಿದೆ. ಪಕ್ಕದಲ್ಲೇ ವಿದ್ಯುತ್ ತಂತಿಯೂ ಹಾದುಹೋಗಿದ್ದು, ಯಾವುದೇ ಕ್ಷಣ ಮುರಿದು ಬೀಳುವ ಭೀತಿ ನೆಲೆಗೊಂಡಿತ್ತು. ಈ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಶ್ರೀಹರ್ಷ ಹಾಗೂ ಪಿಟಿಎ ಜಂಟಿಯಾಗಿ ಪಂಚಾಯತ್ಗೆ ಮನವಿ ಸಲ್ಲಿಸಿದ್ದು, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪಂಚಾಯತ್, ವನ ಸಂರಕ್ಷಣಾ ಸಮಿತಿ ಒಳಗೊಂಡ ‘ಟ್ರೀ ಕಮಿಟಿ’ ಪರಿಶೀಲನೆ ನಡೆಸಿ ಮರಗಳನ್ನು ತೆರವುಗೊಳಿಸಲು ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಮರಗಳ ರೆಂಬೆಗಳನ್ನು ಕಡಿದು ಬಳಿಕ ಬುಡ ಸಮೇತ ತೆರವುಗೊಳಿಸಲಾಯಿತು.
ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸುಕುಮಾರ ಎನ್, ಸದಸ್ಯರಾದ ಶ್ರೀಧರ, ಸತ್ಯವತಿ, ಶಿಕ್ಷಕರು, ವನ ಸಂರಕ್ಷಣಾ ಸಮಿತಿ ಪದಾಧಿಕಾರಗಳು ಉಪಸ್ಥಿತರಿದ್ದರು.







