ಮಾರ್ಪನಡ್ಕ: ಕುಂಬ್ಡಾಜೆ ೫ನೇ ವಾರ್ಡ್ ವ್ಯಾಪ್ತಿಯ ಬೆಳಿಂಜ ಆಯುರ್ವೇದ ಡಿಸ್ಪೆನ್ಸರಿ ಸಮೀಪವಿರುವ ದೊಡ್ಡ ಆಲದಮರವೊಂದು ರಸ್ತೆಗೆ ಮಗುಚಿ ಬಿದ್ದಿದೆ. ಇದರಿಂದ ಸಂಚಾರ ಮೊಟಕುಗೊಂಡಿತ್ತು. ಅಗ್ನಿಶಾಮಕದಳ ತಲುಪಿ ಮರದ ರೆಂಬೆಗಳನ್ನು ಕತ್ತರಿಸಿ ತೆಗೆದು ಸಂಚಾರ ಪುನರ್ಸ್ಥಾಪಿಸಿದರು. ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ. ಸುಗುರ ನೇತೃತ್ವದಲ್ಲಿ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿದೆ.
ಜೆಸಿಬಿಯ ಸಹಾಯದಿಂದ ರಸ್ತೆಗೆ ಬಿದ್ದಿದ್ದ ಮರದ ತುಂಡುಗಳನ್ನು ತೆರವುಗೊಳಿಸಲಾಗಿದೆ. ಅಗ್ನಿಶಾಮಕ ದಳದ ಎಸ್. ಅರುಣ್ ಕುಮಾರ್, ಅತುಲ್ ರವಿ, ಅಶ್ವಿನಿ ಎಸ್.ಎಂ, ಅರುಣ ಪಿ. ನಾಯರ್, ಶಬಿಲ್ ಕುಮಾರ್, ಹೋಂಗಾರ್ಡ್ಗಳಾದ ರಾಗೇಶ್ ಎನ್.ಪಿ, ಸೋಬಿನ್ ಎಂಬಿವರು ಕಾರ್ಯಾಚರಣೆ ತಂಡದಲ್ಲಿದ್ದರು.
ಪಂಚಾಯತ್ ಅಧ್ಯಕ್ಷೆ ಯಶೋಧ ಎನ್, ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ, ನಯನ, ಪ್ರಿಯಾಂಕ ಎ.ಸಿ, ಮಹೇಶ್, ಪ್ರಮೋದ್ ಮೊದಲಾದವರು ಸಹಕರಿಸಿದರು.




