ನಾಪತ್ತೆಯಾದ ಪಿಗ್ಮಿ ಕಲೆಕ್ಷನ್ ಏಜೆಂಟ್‌ನ ಮೃತದೇಹ ಪತ್ತೆ

ಕಾಸರಗೋಡು: ಮೊನ್ನೆ ರಾತ್ರಿಯಿಂದ ನಾಪತ್ತೆಯಾಗಿದ್ದ ಕಲ್ಲಕಟ್ಟ ಸಮೀಪದ ಪಾಂಬಾಚಿ ಕಡವ್ ಶ್ರೀ ಅಯ್ಯಪ್ಪ ಭಜನಾ ಮಂದಿರ ಬಳಿಯ ಬನ್ನಡ್ಕ ಹೌಸ್‌ನ ಆನಂದನ್ ಎಂಬವರ ಪುತ್ರ ಸಹಕಾರಿ ಬ್ಯಾಂಕ್‌ನ ಪಿಗ್ಮಿ ಕಲೆಕ್ಷನ್ ಏಜೆಂಟ್ ರಮೇಶನ್ ಬಿ.ಎ (5೦)ರ ಮೃತದೇಹ ಇಂದು ಬೆಳಿಗ್ಗೆ ನೆಲ್ಲಿಕುಂಜೆ ಹಾರ್ಬರ್ ಬಳಿ  ಸಮುದ್ರದಲ್ಲಿ ಪತ್ತೆಯಾಗಿದೆ. ವಿಷಯ ತಿಳಿದ ಕಾಸರಗೋಡು ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದರು.

ರಮೇಶನ್ ಉಪಯೋಗಿಸುತ್ತಿದ್ದ ಸ್ಕೂಟರ್ ಚಂದ್ರಗಿರಿ ಸೇತುವೆ ಬಳಿ ನಿನ್ನೆ ಮುಂಜಾನೆ ಪತ್ತೆಯಾಗಿತ್ತು. ಅದರಲ್ಲಿ ಅವರ ಮೊಬೈಲ್ ಫೋನ್, ಪಿಗ್ಮಿ ಕಲೆಕ್ಷನ್ ಹಣ ಸೇರಿದಂತೆ ಇತರ ಹಲವು ದಾಖಲು ಪತ್ರಗಳೂ ಪತ್ತೆಯಾಗಿತ್ತು. ಸ್ಕೂಟರ್ ಸೇತುವೆ ಬಳಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಶಂಕೆಗೊಂಡ ಪೊಲೀಸರು ಹಾಗೂ ಕಾಸರಗೋಡು ಅಗ್ನಿಶಾಮಕ ದಳ ಚಂದ್ರಗಿರಿ ಹೊಳೆಯಲ್ಲಿ ಮೊನ್ನೆ ರಾತ್ರಿಯಿಂದಲೇ ವ್ಯಾಪಕ ಶೋಧ ಆರಂಭಿಸಿದ್ದರು. ಇಂದು ಬೆಳಿಗ್ಗೆ  ಪುನಃ ಶೋಧ ಕಾರ್ಯಾಚರಣೆ ನಡೆಯುತ್ತಿ ರುವ ವೇಳೆಯಲ್ಲೇ ಇಂದು ಬೆಳಿಗ್ಗೆ ರಮೇಶನ್‌ರ ಮೃತದೇಹ ನೆಲ್ಲಿಕುಂಜೆ ಹಾರ್ಬರ್ ಬಳಿ ಸಮುದ್ರದಲ್ಲಿ ಪತ್ತೆಯಾಗಿದೆ.   ಆ ಕೂಡಲೇ ಅದನ್ನು ಸಮುದ್ರದಿಂದ ದಡಕ್ಕೆ ತಲುಪಿಸಿ  ಪರಿಶೀಲಿಸಿದಾಗ ಅದು ರಮೇಶನ್‌ರ ಮೃತದೇಹವಾಗಿರುವುದು ಸ್ಪಷ್ಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ೩೨ ವರ್ಷಗಳಿಂದ ಬ್ಯಾಂಕ್‌ನ ಪಿಗ್ಮಿ ಕಲೆಕ್ಷನ್ ಏಜೆಂಟ್ ಆಗಿ ದುಡಿಯುತ್ತಿದ್ದ ಮೃತರು ತಾಯಿ ಲಕ್ಷ್ಮಿ, ಪತ್ನಿ ಶಾಲಿನಿ, ಮಕ್ಕಳಾದ ಹರಿದೇವ್, ವಿಷ್ಣುಪ್ರಿಯ, ಸಹೋದರ- ಸಹೋದರಿಯರಾದ ದಿನೇಶನ್, ಸುರೇಶನ್, ವನಜ, ಭಾನು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page