ಪ್ರತಾಪನಗರದಲ್ಲಿ ಮನೆಯ ಮುಂಭಾಗದ ತೆಂಗಿನ ಮರಕ್ಕೆ ಸಿಡಿಲು ಬಡಿದು ಹಾನಿ; ಮನೆ ಮಂದಿ ಅಪಾಯದಿಂದ ಪಾರು

ಉಪ್ಪಳ: ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಹತ್ತಿದ್ದು, ಈ ವೇಳೆ ಹೊರಗಡೆಯಿದ್ದ ಮನೆ ಮಂದಿ ಅಪಾಯದಿಂದ ಪಾರಾಗಿ ದ್ದಾರೆ. ಮಂಗಲ್ಪಾಡಿ ಪ್ರತಾಪನಗರ ನಿವಾಸಿ ಬ್ಯಾಂಕ್ ಉದ್ಯೋಗಿ ಶಿವಪ್ರಸಾದ್ ಎಂಬವರ ಮನೆ ಅಂಗಳದಲ್ಲಿರುವ ತೆಂಗಿನ ಮರಕ್ಕೆ ನಿನ್ನೆ ರಾತ್ರಿ ಸುಮಾರು 10ಗಂಟೆಗೆ ಸಿಡಿಲು ಬಡಿದಿದೆ. ಇದರಿಂದ ಬೆಂಕಿ ಹತ್ತಿಕೊಂಡಿದೆ. ಇದೇ ವೇಳೆ ಹೊರಗಡೆ ಸಿಟ್‌ಔಟ್‌ನಲ್ಲಿ ಕುಳುತುಕೊಂಡಿದ್ದ ಮನೆ ಮಂದಿ ಓಡಿ ಹೊರಗಡೆ ಹೋಗಿದ್ದಾರೆ. ಇದರಿಂದ ಅಪಾಯ ತಪ್ಪಿದೆ. ಕೂಡಲೇ ಉಪ್ಪಳದಿಂದ ಅಗ್ನಿ ಶಾಮಕ ದಳ ತಲುಪಿದ್ದು, ಅಷ್ಟರಲ್ಲಿ ಜೋರಾಗಿ ಮಳೆ ಬಂದ ಕಾರಣ ಬೆಂಕಿ ನಂದಿದೆ. ಈ ಪರಿಸರದ ವಿದ್ಯುತ್ ಕಂಬಕ್ಕೂ ಹಾನಿಯಾಗಿದ್ದು, ಈ ಪರಿಸರ ಪ್ರದೇಶದಲ್ಲಿ ವಿದ್ಯುತ್ ಮೊಟಕುಗೊಂಡಿದೆ. ನಿನ್ನೆ ರಾತ್ರಿ ಸುಮಾರು 10ಗಂಟೆ ವೇಳೆ ಮಂಜೇಶ್ವರ ಬಡಾಜೆ ರಸ್ತೆಗೆ ಖಾಸಗಿ ವ್ಯಕ್ತಿಯ ಗೇರು ಮರವೊಂದು ರಸ್ತೆಗೆ ಮುರಿದು ಬಿದ್ದು ಸಂಚಾರ ಮೊಟಕುಗೊಂಡಿದೆ. ಬಳಿಕ ಉಪ್ಪಳ ಅಗ್ನಿಶಾಮಕ ದಳ ತಲುಪಿ ಮರವನ್ನು ಕಡಿದು ತೆರವುಗೊಳಿಸಿ ಸಂಚಾರಕ್ಕೆ ವ್ಯವಸ್ಥೆಮಾಡಿದ್ದಾರೆ.

You cannot copy contents of this page