ಕುಂಬಳೆ: ಯುವಮೋರ್ಛಾ ನೇತಾರ, ತಂದೆಯ ನಿಗೂಢ ಸಾವು ಸಮಗ್ರ ತನಿಖೆಗೆ ಒತ್ತಾಯಿಸಿ ಕ್ರಿಯಾ ಸಮಿತಿ ರಂಗಕ್ಕೆ
ಕುಂಬಳೆ: ಭಾರತೀಯ ಜನತಾ ಯುವ ಮೋರ್ಛಾ ಕುಂಬಳೆ ಮಂಡಲ ಉಪಾಧ್ಯಕ್ಷರೂ ಬಂ ಬ್ರಾಣ ಕಲ್ಕುಳದ ಕ್ವಾರ್ಟರ್ಸ್ನಲ್ಲಿ ವಾಸಿಸುತ್ತಿದ್ದ ರಾಜೇಶ್ (26) ಅವರ ಸಾವಿನ ನಿಗೂಢತೆ ಕುರಿತು ಸಮಗ್ರ ತನಿಖೆ ನಡೆಸಬೇಕೆಂಬ ಬೇಡಿಕೆ ಮತ್ತೆ ತೀವ್ರಗೊಂಡಿದೆ. 2023 ಜುಲೈ 10ರಂದು ಮನೆಯಿಂದ ನಾಪತ್ತೆ ಯಾಗಿದ್ದ ರಾಜೇಶ್ರ ಮೃತದೇಹ 12ರಂದು ನೇತ್ರಾವತಿ ಹೊಳೆಯ ಬೆಂಗರೆ ಎಂಬಲ್ಲಿ ಪತ್ತೆಯಾಗಿತ್ತು. ಇದೇ ವೇಳೆ ರಾಜೇಶ್ರ ಸಾವಿನ ಕುರಿತು ನಿಗೂಢತೆ ಹುಟ್ಟಿಕೊಂಡಿತ್ತು. ಇದರಿಂದ ರಾಜೇಶ್ರ ಸಾವಿನ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಿ ಕ್ರಿಯಾ ಸಮಿತಿ ರಚಿಸಲಾಗಿತ್ತು. ಅಲ್ಲದೆ ಈ ಬೇಡಿಕೆ ಮುಂದಿರಿಸಿ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹಾಗೂ ಉಳ್ಳಾಲ ಪೊಲೀಸರಿಗೆ ದೂರು ಸಲ್ಲಿಸಲಾಗಿತ್ತು. ಇದೇ ವೇಳೆ ರಾಜೇಶ್ರ ಸಾವಿನಿಂದ ಮನನೊಂದ ಅವರ ತಂದೆ ಲೋಕನಾಥ್ (51) ಉಳ್ಳಾಲ ಸಮುದ್ರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೀಗೆ 32 ದಿನಗಳ ಮಧ್ಯೆ ತಂದೆ ಹಾಗೂ ಮಗನ ನಿಗೂಢ ಸಾವು ಸಂಭವಿಸಿತ್ತು. ಇದೇ ವೇಳೆ ಲೋಕನಾಥ್ ಸಾವಿಗೀಡಾಗುವ ಮೊದಲು ಸ್ನೇಹಿತರಿಗೆ ಮೊಬೈಲ್ನಲ್ಲಿ ವಾಟ್ಸಪ್ ಮೂಲಕ ಸಂದೇಶ ಕಳುಹಿಸಿದ್ದಾರೆನ್ನ ಲಾಗಿದೆ. ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ, ತನ್ನ ಹಾಗೂ ಮಗ ರಾಜೇಶ್ನ ಸಾವಿಗೆ ಕಾರಣ ನಾಲ್ಕು ಮಂದಿಯಾಗಿ ದ್ದಾರೆಂದೂ ಸಂದೇಶದಲ್ಲಿ ಲೋಕನಾಥ್ ತಿಳಿಸಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈ ಇಬ್ಬರ ಸಾವಿಗೆ ಕಾರಣರಾದವರನ್ನು ಬಂಧಿಸಬೇಕೆಂದು ಕ್ರಿಯಾ ಸಮಿತಿ ಪೊಲೀಸರನ್ನು ಒತ್ತಾಯಿಸಿತ್ತು. ಆದರೆ ಇದುವರೆಗೂ ಪ್ರಕರಣಕ್ಕೆ ಸಂಬಂಧಿಸಿ ಯಾರನ್ನೂ ಬಂಧಿಸಲಿಲ್ಲ. ಅಲ್ಲದೆ ತನಿಖೆಯಲ್ಲಿ ಯಾವುದೇ ಪುರೋಗತಿ ಉಂಟಾಗದ ಹಿನ್ನೆಲೆಯಲ್ಲಿ ಕ್ರಿಯಾ ಸಮಿತಿ ಮತ್ತೆ ರಂಗಕ್ಕಿಳಿಯಲು ನಿರ್ಧರಿಸಿದೆ.
ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಬೇಕೆಂದು ಒತ್ತಾಯಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ನಡೆದ ಕ್ರಿಯಾ ಸಮಿತಿ ಸಭೆಯಲ್ಲಿ ಕ್ರಿಯಾ ಸಮಿತಿ ಚೆಯರ್ಮೆನ್ ಪ್ರದೀಪ್, ವೈಸ್ ಚೆಯರ್ಮೆನ್ ಮೋಹನ ಬಂಬ್ರಾಣ, ಕನ್ವೀನರ್ ಮಾಯಾ ಪ್ರಸಾದ್, ಜತೆ ಕನ್ವೀನರ್ ಕಿಶೋರ್ ಶ್ರೇಯಸ್, ಜಯಪ್ರಕಾಶ್ ಮೊದಲಾದವರು ಭಾಗವಹಿಸಿದರು.