ಪಹಲ್ಗಾಮ್ ದಾಳಿಯ ಸೂತ್ರಧಾರ ಸಜ್ಜಾದ್ಗುಲ್ ಕೇರಳದೊಂದಿಗೆ ನಂಟು ಹೊಂದಿರುವ ಸ್ಫೋಟಕ ಮಾಹಿತಿ ಬಯಲು
ತಿರುವನಂತಪುರ: ಜಮ್ಮು- ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕರಾದ 26 ಮಂದಿ ಪ್ರವಾಸಿಗರನ್ನು ಕೊಂದ ಭಯೋತ್ಪಾದನಾ ದಾಳಿಯ ಪ್ರಧಾನ ಸೂತ್ರಧಾರ ಪಾಕಿಸ್ತಾನದ ಉಗ್ರಗಾಮಿ ಸಂಘಟನೆಯಾದ ಲಷ್ಕರ್-ಎ -ತೊಬಾದ ಉಪ ಸಂಘಟನೆಯಾದ ‘ದಿ ರೆಸಿಸ್ಟನ್ಸ್ ಫ್ರಂಟ್’ನ ಮುಖ್ಯಸ್ಥ ಶೇಖ್ ಸಜ್ಜಾದ್ ಗುಲ್ (5೦) ಕೇರಳದೊಂದಿಗೂ ನಂಟು ಹೊಂದಿದ್ದನೆಂಬ ಸ್ಫೋಟಕ ಮಾಹಿತಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ಲಭಿಸಿದೆ.
ಸಜ್ಜಾದ್ಗುಲ್ ಭಯೋತ್ಪಾದಕ ಗುಂಪಿಗೆ ಸೇರ್ಪಡೆಗೊಳ್ಳುವ ಮೊದಲು ಈ ಹಿಂದೆ ಕೇರಳದಲ್ಲಿ ಲ್ಯಾಬ್ ಟೆಕ್ನೀಶ್ಯನ್ ಕೋರ್ಸ್ ಕಲಿತಿದ್ದನು. ಈತನನ್ನು ಅಹಮ್ಮದ್ ಶೇಖ್ ಎಂದೂ ಕರೆಯಲಾಗುತ್ತಿದೆ. ಮೊದಲು ಶ್ರೀನಗರದಲ್ಲಿ ಶಿಕ್ಷಣ ಪಡೆದ ಗುಲ್, ನಂತರ ಬೆಂಗಳೂರಿನಲ್ಲಿ ಎಂಬಿಎ ಪದವಿ ಪೂರ್ತಿಗೊಳಿಸಿದ್ದನು. ನಂತರ ಆತ ಕೇರಳಕ್ಕೆ ಬಂದು ಲ್ಯಾಬ್ ಟೆಕ್ನೀಶ್ಯನ್ ಕೋರ್ಸ್ಗೆ ಸೇರಿದ್ದು, ಬಳಿಕ ಕಾಶ್ಮೀರಕ್ಕೆ ಮರಳಿದ ಆತ ಅಲ್ಲಿ ಡಯಾಗ್ನಿಸ್ಟಿಕ್ ಲ್ಯಾಬ್ ತೆರೆದು, ಅದರ ಜತೆಗೇ ಭಯೋತ್ಪಾದಕ ಸಂಘಟನೆಗಳಿಗೆ ಅಗತ್ಯದ ಸರಕುಗಳನ್ನು ಪೂರೈಸುವ ಕೆಲಸವನ್ನು ಮಾಡುತ್ತಿದ್ದ. ಆ ಬಳಿಕ ಆತ ಭಯೋತ್ಪಾದಕ ಸಂಘಟನೆಯಾದ ಲಷ್ಕರ್ ಎ-ತೊಬಾ ಮೂಲಕ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯಾದ ಐಎಸ್ಐಗೆ ಏಜೆಂಟ್ಆಗಿ ಕಾರ್ಯವೆಸಗತೊಡಗಿದನು. ೨೦೦೨ರಲ್ಲಿ ದಿಲ್ಲಿಯ ನಿಜಾಮುದ್ದೀನ್ ರೈಲು ನಿಲ್ದಾಣದ ಬಳಿ ದೆಹಲಿ ಪೊಲೀಸರು ಗುಲ್ನನ್ನು ೫ ಕೆ.ಜಿ ಆರ್.ಡಿ.ಎಕ್ಸ್ ನೊಂದಿಗೆ ಬಂಧಿಸಿದ್ದರು. ಈ ಸ್ಫೋಟಕಗಳನ್ನು ಬಳಸಿ ದೆಹಲಿ ಯಲ್ಲಿ ಸರಣಿ ಬಾಂಬ್ ಸ್ಫೋಟ ಗಳನ್ನು ನಡೆಸಲು ಸಂಚು ರೂಪಿಸಿದ್ದ. ಆ ಪ್ರಕರಣದಲ್ಲಿ ಆತನಿಗೆ ೨೦೦೩ ಆಗಸ್ಟ್ ೭ರಂದು ೧೦ ವರ್ಷ ಶಿಕ್ಷೆ ವಿಧಿಸಲಾಗಿತ್ತು. ಶಿಕ್ಷೆ ಕಳೆದು ೨೦೧೭ರಲ್ಲಿ ಬಿಡುಗಡೆಗೊಂಡ ನಂತರ ಆತ ಪಾಕಿಸ್ತಾನಕ್ಕೆ ತೆರಳಿದ್ದು, ನಂತರ ಲಷ್ಕರ್-ಎ ತೊಬಾದ ಅಂಗಸಂಸ್ಥೆ ಯಾದ ದಿ ರೆಸಿಸ್ಟೆನ್ಸ್ ಫ್ರಂಟ್ನ ಹೊಣೆಗಾರಿಕೆಯನ್ನು ಐಎಸ್ಐ ಆತನಿಗೆ ನೀಡಿತು. ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ನಡೆಸುವ ಹೊಣೆಗಾರಿಕೆಯನ್ನು ಈತನಿಗೆ ನೀಡಲಾಗಿತ್ತೆಂಬ ಮಾಹಿತಿ ಎನ್ಐಎಗೆ ಲಭಿಸಿದೆ. ಗುಲ್ನ ಸಹೋದರ ವೈದ್ಯನಾಗಿದ್ದು, ಆತನೂ ಭಯೋತ್ಪಾಕರ ಸಂಘಟನೆ ಸೇರಿರುವ ಮಾಹಿತಿಯೂ ಲಭಿಸಿದೆ.
2022 ಎಪ್ರಿಲ್ನಲ್ಲಿ ಎನ್ಐಎ ಗುಲ್ನನ್ನು ಉಗ್ರನೆಂದು ಘೋಷಿಸಿ, ಈತನ ತಲೆಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.ಈತ ಈಗ ಪಾಕಿಸ್ತಾನದ ರಾವಲ್ಪಿಂಡಿ ಕಂಟೋನ್ಮೆಂಟ್ ಪ್ರದೇಶದಲ್ಲೇ ನೆಲೆಸಿದ್ದಾನೆ.