ಪೊಸಡಿಗುಂಪೆಯನ್ನು ಹಸಿರು ಟೂರಿಸಂ ಕೇಂದ್ರವಾಗಿಸಲು ತೀರ್ಮಾನ
ಪೈವಳಿಕೆ: ಜಿಲ್ಲೆಯ ಪ್ರಸಿದ್ಧ ಪ್ರವಾಸೋದ್ಯಮ ಕೇಂದ್ರವಾದ ಪೊಸಡಿಗುಂಪೆಯನ್ನು ಮಾಲಿನ್ಯ ಮುಕ್ತ ಹಸಿರು ಟೂರಿಸಂ ಕೇಂದ್ರವಾಗಿಸಲು ತೀರ್ಮಾನಿಸಲಾಗಿದೆ. ಪೈವಳಿಕೆ ಪಂಚಾಯತ್ ಹಾಲ್ನಲ್ಲಿ ನಡೆದ ನವಕೇರಳ ಕ್ರಿಯಾ ಯೋಜನೆ ಪಂಚಾಯತ್ ಮಟ್ಟದ ಸಭೆಯಲ್ಲಿ ಪೈವಳಿಕೆ ಪಂಚಾಯತ್ ಅಧಕ್ಷೆ ಜಯಂತಿ ಕೆ ಅವರ ಅಧ್ಯಕ್ಷತೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ನವಕೇರಳ ಕ್ರಿಯಾ ಯೋಜನೆ ಜಿಲ್ಲ್ಲಾ ಕೋ-ಆರ್ಡಿನೇಟರ್ ಕೆ. ಬಾಲಕೃಷ್ಣನ್ ಹಸಿರು ಟೂರಿಸಂ ಯೋಜನೆಯ ಮುಂದಿನ ಕ್ರಮಗಳನ್ನು ಹಾಗೂ ಪ್ರವಾಸಿಗರನ್ನು ಸೆಳೆಯಲು ಬೇಕಾಗಿರುವ ವಿವಿಧ ಯೋಜನೆಗಳ ಕುರಿತು ವಿವರಿಸಿದರು. ಡಿಟಿಪಿಸಿ ಕಾರ್ಯದರ್ಶಿ ಲಿಜೂ ಪ್ರವಾಸೋದ್ಯಮ ಇಲಾಖೆಯು ೧.೧೫ ಕೋಟಿ ರೂಪಾಯಿ ಮಂಜೂರು ಮಾಡಿದ್ದು, ಜಾರಿಗೊಳಿಸಲು ಉದ್ದೇಶಿಸಿರುವ ಚಟುವಟಿಕೆಗಳ ಕುರಿತು ವಿವರಿಸಿದರು. ಪೈವಳಿಕೆ ಪಂಚಾಯತ್ ಅಭಿವೃದ್ಧಿ ಕಾರ್ಯಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ರಜಾಕ್ ಚಿಪ್ಪಾರು, ಪಂಚಾಯತ್ ಸದಸ್ಯರಾದ ಅಬ್ದುಲ್ಲ ಕೆ, ಅಶೋಕ್ ಭಂಡಾರಿ, ಶ್ರೀನಿವಾಸ ಭಂಡಾರಿ, ರಹಮತ್ ರಹಿಮಾನ್.ಕೆ, ನವಕೇರಳ ಕ್ರಿಯಾ ಯೋಜನೆ ರಿಸೋರ್ಸ್ ಪರ್ಸನ್ ವಿನಯ್ ಕುಮಾರ್ ಬಾಯಾರು ಮಾತನಾಡಿದರು. ಪಂಚಾಯತ್ ಸಹಕಾರ್ಯದರ್ಶಿ ಲಾರೆನ್ಸ್ ಸ್ವಾಗತಿಸಿದರು. ಡಿಸೆಂಬರ್ ೭ರಂದು ಜನಪರ ಶುಚೀಕರಣ ಚಟುವಟಿಕೆಗಳು ನಡೆಯಲಿದೆ.