ಬೈಕ್-ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ಅಪಘಾತ: ಇಬ್ಬರು ಕಾಲೇಜು ವಿದ್ಯಾರ್ಥಿಗಳ ದಾರುಣ ಮೃತ್ಯು; ನಾಡಿನಲ್ಲಿ ಶೋಕಸಾಗರ
ಉಪ್ಪಳ: ಟಿಪ್ಪರ್ ಲಾರಿ ಹಾಗೂ ಬೈಕ್ ಢಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ದಾರುಣ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ನಿನ್ನೆ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿಯ ಮುಟ್ಟಗೇಟ್ ಬಳಿ ಅಪಘಾತ ಸಂಭವಿಸಿದೆ.
ಉಪ್ಪಳ ನಯಾಬಜಾರ್ ನಾಟೆ ಕಲ್ ಹೌಸ್ನ ಅಬ್ದುಲ್ ಖಾದರ್ ಎಂಬವರ ಪುತ್ರ ಮುಹಮ್ಮದ್ ಮುಶ್ ಹಾಬ್ (೨೧), ಮಂಜೇಶ್ವರ ಬಡಾಜೆ ಮೇಲಂಗಡಿ ರಸ್ತೆಯ ನಿವಾಸಿ ಹನೀಫ್ ಎಂಬವರ ಪುತ್ರ ಮೊಹಮ್ಮದ್ ಹಮೀನ್ ಮೆಹರೂಪ (೨೦) ಎಂಬ ವರು ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇಬ್ಬರೂ ಮಂಗಳೂರು ಶ್ರೀನಿವಾಸ ಕಾಲೇಜಿನ ದ್ವಿತೀಯ ವರ್ಷ ಬಿಬಿಎ ವಿದ್ಯಾರ್ಥಿ ಗಳಾಗಿದ್ದಾರೆ.
ಕಳೆದ ಗುರುವಾರ ರಾತ್ರಿ ಕಾಸರ ಗೋಡಿನ ಟರ್ಫ್ ಗ್ರೌಂಡ್ನಲ್ಲಿ ಇವರು ಆಟವಾಡಲು ತೆರಳಿದ್ದರು. ನಿನ್ನೆ ಬೆಳಿಗ್ಗೆ ೯ ಗಂಟೆ ವೇಳೆ ಆಟ ಮುಗಿದ ಬಳಿಕ ಈ ಇಬ್ಬರು ಬೈಕ್ನಲ್ಲಿ ಸಂಚರಿಸಿ ಬಳಿಕ ಕಾಸರಗೋಡಿನ ಹೋಟೆಲ್ನಲ್ಲಿ ಚಹಾ ಕುಡಿದು ಉಪ್ಪಳದತ್ತ ತೆರಳಿದ್ದರು.
ಮುಟ್ಟಗೇಟ್ ಬಳಿಗೆ ತಲುಪಿದಾಗ ಇವರು ಸಂಚರಿಸುತ್ತಿದ್ದ ಬೈಕ್ಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಉಪಯೋಗಿಸುವ ಟಿಪ್ಪರ್ ಲಾರಿ ಢಿಕ್ಕಿಹೊಡೆಯಿತು. ಅಪಘಾತದಲ್ಲಿ ಬೈಕ್ ಪ್ರಯಾಣಿಕರಾದ ಈ ಇಬ್ಬರು ಗಂಭೀರಗಾಯಗೊಂಡಿದ್ದರು. ಘಟನೆ ಅರಿತು ತಲುಪಿದ ನಾಗರಿಕರು ಗಾಯಾಳುಗಳನ್ನು ಕೂಡಲೇ ಬಂದ್ಯೋಡಿನ ಆಸ್ಪತ್ರೆಗೂ ಬಳಿಕ ಮಂಗಳೂರಿನ ಆಸತ್ರೆಗೆ ಕೊಂಡೊಯ್ದರು. ಆದರೆ ಮಧ್ಯಾಹ್ನ ೧೨.೧೫ಕ್ಕೆ ಮುಹಮ್ಮದ್ ಮುಶ್ಹಾಬ್ ಮೃತಪಟ್ಟನು. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಮುಹಮ್ಮದ್ ಹಮೀನ್ ಮೆಹರೂಫ್ ರಾತ್ರಿ ೭ ಗಂಟೆ ವೇಳೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಮುಹಮ್ಮದ್ ಮುಶ್ಹಾಬ್ನ ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ರಾತ್ರಿ ೭.೩೦ರ ವೇಳೆ ಪೆರಿಂಗಡಿಯ ಜುಮಾ ಮಸೀದಿ ಆವರಣದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.
ಮುಹಮ್ಮದ್ ಹಮೀನ್ ಮೆಹರೂಫ್ನ ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಉಳ್ಳಾಲ ಮಸೀದಿ ಆರಣದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಮೃತ ಮುಹಮ್ಮದ್ ಮುಶ್ಹಾಬ್ ತಂದೆ, ತಾಯಿ ಫೌಸಿಯಾ, ಸಹೋದರ-ಸಹೋದರಿಯರಾದ ಮುಸ್ಲ, ನದಾ, ನೂಹ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಅದೇ ರೀತಿ ಮುಹಮ್ಮದ್ ಹಮೀನ್ ಮೆಹರೂಫ್ ತಂದೆ, ತಾಯಿ ಸಮೀಮ, ಸಹೋದರ-ಸಹೋದರಿಯರಾದ ಸನಾ, ಮಹ್ಶೂಕ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಸ್ನೇಹಿತರಾದ ಇಬ್ಬರು ವಿದ್ಯಾರ್ಥಿಗಳು ಅಪಘಾತದಲ್ಲಿ ಮೃತಪಟ್ಟ ಘಟನೆ ಉಪ್ಪಳ ಹಾಗೂ ಮಂಜೇಶ್ವರ ಪ್ರದೇಶದಲ್ಲಿ ಶೋಕಸಾಗರ ಸೃಷ್ಟಿಸಿದೆ. ಅಪಘಾತ ಬಗ್ಗೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ.