ಬೈಕ್ ಢಿಕ್ಕಿ ಹೊಡೆದು ಪಾದಚಾರಿ ಯುವಕ ಮೃತ್ಯು

ಸೀತಾಂಗೋಳಿ: ನಿಯಂತ್ರಣ ತಪ್ಪಿದ ಬೈಕ್ ಢಿಕ್ಕಿ ಹೊಡೆದು ಪಾದಚಾರಿಯೊಬ್ಬರು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.

ಬೇಳ ನಿವಾಸಿ ರಬ್ಬರ್ ಟ್ಯಾಪಿಂಗ್ ಕಾರ್ಮಿಕನಾದ ಸುರೇಶ್  ಡಿ (40) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ರಾತ್ರಿ 8 ಗಂಟೆ ವೇಳೆ ಸೀತಾಂಗೋಳಿ ಪೆಟ್ರೋಲ್ ಪಂಪ್ ಸಮೀಪ ಅಪಘಾತ ಸಂಭವಿಸಿದೆ. ಸುರೇಶ್ ರಸ್ತೆಬದಿ ನಡೆದು ಹೋಗುತ್ತಿದ್ದಾಗ ಹಿಂದಿನಿಂದ ಆಗಮಿಸಿದ ಬೈಕ್ ಅವರಿಗೆ ಢಿಕ್ಕಿ ಹೊಡೆದಿದೆ. ಇದರಿಂದಾಗಿ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡ ಸುರೇಶ್‌ರನ್ನು ಕೂಡಲೇ ನಾಗರಿಕರು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದ್ದು, ಆದರೆ ಜೀವರಕ್ಷಿಸಲಾಗಲಿಲ್ಲ. ಘಟನೆ ಸ್ಥಳಕ್ಕೆ ಪೊಲೀಸರು ಶೀಘ್ರ ತಲುಪಿದ್ದು, ಅಪಘಾತ ಸೃಷ್ಟಿಸಿದ ಬೈಕನ್ನು ಕಸ್ಟಡಿಗೆ ತೆಗೆದು ಅದರ ಸವಾರನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಸುರೇಶ್‌ರ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದ್ದು ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ.

ದಿವಂಗತರಾದ ಮದರ- ಲೀಲ ದಂಪತಿಯ ಪುತ್ರನಾದ ಸುರೇಶ್ ಪತ್ನಿ ಜಯಂತಿ, ಸಹೋದರರಾದ ಅಚ್ಯುತ, ದಯಾನಂದ, ಅಶೋಕ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page