ಮನೆಗೆ ತಾಗಿ ನಿಂತ ಮಡಲು ತೆಗೆಯುತ್ತಿದ್ದಾಗ ವಿದ್ಯುತ್ ಶಾಕ್ ತಗಲಿ ಪೆಟ್ರೋಲ್ ಪಂಪ್ ನೌಕರ ಮೃತ್ಯು

ಉಪ್ಪಳ: ಮನೆ ಛಾವಣಿಗೆ ತಾಗಿಕೊಂಡಿದ್ದ ತೆಂಗಿನ ಮಡಲನ್ನು ಎಳೆದು ತೆಗೆಯುತ್ತಿದ್ದಂತೆ ಹೈ ಟೆನ್ಶನ್ ವಿದ್ಯುತ್ ತಂತಿಯಿಂದ ಶಾಕ್ ತಗಲಿ ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮಂಜೇಶ್ವರ ಗೋವಿಂದ ಪೈ ಕಾಲೇಜು ರಸ್ತೆಯ ಹೊಸಬೆಟ್ಟು ನಿವಾಸಿ ರಾಮಚಂದ್ರ ಎಂಬವರ ಪುತ್ರ ಯಶವಂತ್ (23) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ಉಪ್ಪಳದ ಪೆಟ್ರೋಲ್ ಬಂಕ್‌ನ ನೌಕರನಾಗಿದ್ದಾರೆ.

ನಿನ್ನೆ ಸಂಜೆ ಕೆಲಸಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದಂತೆ ಮನೆಯ ಛಾವಣಿಗೆ ತೆಂಗಿನ ಮಡಲು ಬಾಗಿ ನಿಂತಿರುವುದು ಕಂಡು ಬಂದಿದೆ. ಅದನ್ನು ತೆಗೆಯಲೆಂದು ಮನೆಯ ಮೇಲಂತಸ್ತಿಗೆ ಹತ್ತಿದ್ದಾರೆ. ಅಲ್ಲಿ ನಿಂತು ಮಡಲು ಎಳೆದು ತೆಗೆಯುತ್ತಿದ್ದಂತೆ ಎಚ್.ಟಿ. ಲೈನ್‌ಗೆ ತಾಗಿ ಶಾಕ್ ತಗಲಿದೆ. ಶಾಕ್ ತಗಲಿದ ಯಶವಂತ್ ಮನೆ ಅಂಗಳಕ್ಕೆ ಅಳವಡಿಸಿದ ಕಬ್ಬಿಣದ ಶೀಟ್‌ನ ಮೇಲೆ ಬಿದ್ದಿದ್ದಾರೆ. ಶಬ್ದ ಕೇಳಿ ತಲುಪಿದ ಮನೆಯವರು ಕೂಡಲೇ ಯಶವಂತ್‌ರನ್ನು ಮಂಜೇಶ್ವರದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಲ್ಪಾಡಿ ತಾಲೂಕು ಸರಕಾರಿ ಆಸ್ಪತ್ರೆಗೆ ತಲುಪಿಸಲಾಯಿತು. ಮೃತರು ತಂದೆ, ತಾಯಿ ಬಬಿತ, ಸಹೋದರ- ಸಹೋದರಿಯರಾದ ಸುಧೀಶ್, ಸುಶ್ಮಿತ, ಜಯಸ್ಮಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮೃತ ಯಶವಂತ್ ಆರ್.ಎಸ್. ಎಸ್. ಕಾರ್ಯಕರ್ತನಾಗಿದ್ದರು. ಅಪಘಾತ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page