ಕುಂಬಳೆ: ಸಂಚರಿಸುತ್ತಿದ್ದ ಆಟೋ ರಿಕ್ಷಾದೊಳಗೆ ಹಾವೊಂದು ಚಾಲಕನ ದೇಹಕ್ಕೆ ಹತ್ತಿದ್ದು ಕೂಡಲೇ ಚಾಲಕ ರಿಕ್ಷಾವನ್ನು ನಿಲ್ಲಿಸಿ ಕೆಳಗಿಳಿದುದರಿಂದ ಅಪಾಯದಿಂದ ಪಾರಾಗಿದ್ದಾರೆ. ಅನಂತರ ಹಾವು ಹಿಡಿಯುವವರು ತಲುಪಿ ಹಾವನ್ನು ಸುರಕ್ಷಿತವಾಗಿ ಕಾಡಿನಲ್ಲಿ ಬಿಟ್ಟಿದ್ದಾರೆ. ನಿನ್ನೆ ಬೆಳಿಗ್ಗೆ ಚೇವಾರ್ನಲ್ಲಿ ಈ ಘಟನೆ ನಡೆದಿದೆ. ಪೈವಳಿಕೆ ಚೇವಾರಿ ನಲ್ಲಿ ಆಟೋ ರಿಕ್ಷಾ ಬಾಡಿಗೆ ನಡೆಸುವ ಪಿಯುಸ್ ಡಿ’ಸೋಜಾ ನಿನ್ನೆ ಬೆಳಿಗ್ಗೆ ಇಬ್ಬರು ಪ್ರಯಾಣಿಕರನ್ನು ಸುಬ್ಬಯ್ಯಕಟ್ಟೆಗೆ ಕರೆದೊಯ್ಯುತ್ತಿದ್ದರು. ಆಟೋ ರಿಕ್ಷಾ ಸಂಚರಿಸುತ್ತಿದ್ದಂತೆ ಪಿಯುಸ್ ಡಿ’ಸೋಜಾರ ಕೈಗೆ ಯಾವುದೋ ಜೀವಿ ಹತ್ತಿದ ಅನುಭವವುಂ ಟಾಯಿತು. ಸೂಕ್ಷ್ಮವಾಗಿ ಗಮನಿಸಿದಾಗ ಹಾವೊಂದು ಅವರ ಕೈಯನ್ನು ಸುತ್ತುವರಿದಿತ್ತು. ಕೂಡಲೇ ಚಾಲಕ ಕೈ ಕೊಡವಿ ಹಾವನ್ನು ಕೆಳಕ್ಕೆ ಹಾಕಿದ್ದಾರೆ. ಬಳಿಕ ಚಾಲಕ ಹಾಗೂ ಪ್ರಯಾಣಿಕರು ಕೆಳಗಿಳಿಯುವಷ್ಟರಲ್ಲಿ ಹಾವು ಆಟೋ ರಿಕ್ಷಾದ ಹ್ಯಾಂಡಲ್ನ ಬಳಿಯ ಸೆರೆಯೊಳಗೆ ನುಗ್ಗಿತು. ಈ ವಿಷಯ ತಿಳಿದ ಹಾವು ಹಿಡಿತಗಾರ ನಾದ ಚೇವಾರ್ನ ಉಬೈದ್ ಕೂಡಲೇ ಸ್ಥಳಕ್ಕೆ ತಲುಪಿದರು. ಬಳಿಕ ಆಟೋ ರಿಕ್ಷಾದ ಹ್ಯಾಂಡಲ್ ಭಾಗವನ್ನು ಪರಿಶೀಲಿಸಿ ದಾಗ ಅದರೊಳಗೆ ಹಾವಿರುವುದು ಪತ್ತೆಯಾಗಿದೆ. ಬಳಿಕ ಅದನ್ನು ಅತೀ ಸಾಹಸದಿಂದ ಹಿಡಿಯುವಲ್ಲಿ ಉಬೈದ್ ಯಶಸ್ವಿಯಾಗಿದ್ದಾರೆ. ಈ ಹಾವು ಅಲ್ಪ ಪ್ರಮಾಣದಲ್ಲಿ ವಿಷವನ್ನು ಹೊಂದಿದೆ ಯೆಂದು ಉಬೈದ್ ತಿಳಿಸಿದ್ದಾರೆ. ಹಾವನ್ನು ಬಳಿಕ ಕಾಡಿಗೆ ಬಿಡಲಾಯಿತು.






