ಮೂರು ತಿಂಗಳ ಗರ್ಭಿಣಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಮೂರು ತಿಂಗಳ ಗರ್ಭಿಣಿ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಯ್ಯಾರು ಕನ್ನಟಿಪಾರೆ ಶಾಂತಿಯೋಡು ನಿವಾಸಿ ವೆಲ್ಡಿಂಗ್ ಕಾರ್ಮಿಕ ಜನಾರ್ದನ ಎಂಬವರ ಪತ್ನಿ ವಿಜೇತ (32) ಮೃತಪಟ್ಟ ಯುವತಿ. ನಿನ್ನೆ ಸಂಜೆ ಇವರು ಮನೆಯ ಬೆಡ್ ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಪತಿ ಜನಾರ್ದನ ನಿನ್ನೆ ಉಳ್ಳಾಲದಲ್ಲಿರುವ ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕಾಗಿ ತೆರಳಿದ್ದರು. ಸಂಜೆ ಅವರು ಮನೆಗೆ ಮರಳಿ ನೋಡಿದಾಗ ವಿಜೇತ ಬೆಡ್‌ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆನ್ನಲಾಗಿದೆ.

ಮಂಗಳೂರು ವಾಮಂಜೂರು ಪಿಲಿಕುಳದ ಸರಸ್ವತಿ ಎಂಬವರ ಪುತ್ರಿಯಾದ ವಿಜೇತ ಹಾಗೂ ಜನಾರ್ದನರ ಮದುವೆ ಒಂದೂವರೆ ವರ್ಷ ಹಿಂದೆ ನಡೆದಿತ್ತು. ವಿಜೇತ ಇದೀಗ ಮೂರು ತಿಂಗಳ ಗರ್ಭಿಣಿಯಾಗಿದ್ದಾರೆ. ಇವರು ನೇಣು ಬಿಗಿಯಲು ಕಾರಣವೇನೆಂದು ತಿಳಿದು ಬಂದಿಲ್ಲ. ಈ ಬಗ್ಗೆ ಲಭಿಸಿದ ದೂರಿನಂತೆ ಕುಂಬಳೆ ಪೊಲೀಸರು ಇಂದು ಬೆಳಿಗ್ಗೆ ಸ್ಥಳಕ್ಕೆ ತೆರಳಿ ಮೃತದೇಹದ ಮಹಜರು ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

Leave a Reply

Your email address will not be published. Required fields are marked *

You cannot copy content of this page