ಮಹಿಳೆ ಬಾವಿಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಮಹಿಳೆಯೊಬ್ಬರು ಬಾವಿಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನ ಬಳಿ ನಿವಾಸಿ ದಿ| ಜನಾರ್ದನ ಆಚಾರ್ಯರ ಪತ್ನಿ ಸುಗುಣ (77) ಮೃತ ಮಹಿಳೆ. ನಿನ್ನೆ ರಾತ್ರಿ ಇವರು ಮನೆಯಲ್ಲಿ ಊಟಮಾಡಿ ನಿದ್ರಿಸಿದ್ದರು. ಇಂದು ಮುಂಜಾನೆ ೩.೩೦ರ ವೇಳೆ ಮನೆಯವರು ಎಚ್ಚೆತ್ತು ನೋಡಿದಾಗ ಸುಗುಣ ನಾಪತ್ತೆಯಾಗಿದ್ದರೆನ್ನಲಾಗಿದೆ. ಇದರಿಂದ ಕೂಡಲೇ ಹುಡುಕಿದಾಗ ಮನೆ ಅಂಗಳದಲ್ಲಿರುವ ಬಾವಿಯಲ್ಲಿ ಸುಗುಣ ಬಿದ್ದಿರುವುದು ಕಂಡುಬಂದಿದೆ. ಈ ಬಗ್ಗೆ ಮನೆಯವರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು, ಅಗ್ನಿಶಾಮಕದಳ ಸಿಬ್ಬಂದಿಗಳು ತಲುಪಿ ಸುಗುಣರನ್ನು ಮೇಲಕ್ಕೆತ್ತುವಷ್ಟರಲ್ಲಿ ಅವರು ಮೃತಪಟ್ಟಿದ್ದರೆನ್ನಲಾಗಿದೆ.

ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆ ಶವಾಗಾರಕ್ಕೆ ತಲುಪಿಸಲಾಗಿದೆ. ಮೃತರು ಮಕ್ಕಳಾದ ಪಾಂಡುರಂಗ ಆಚಾರ್ಯ, ಹಿಮಕರ ಆಚಾರ್ಯ, ಸೌಮಿನಿ, ಗೀತ, ಪುಷ್ಪಲತಾ, ಅಳಿಯಂದಿರಾದ ನಾಗೇಶ ಆಚಾರ್ಯ ಕೋಟೆಕಾರ್, ಜನಾರ್ದನ ಆಚಾರ್ಯ ಮಂಜೇಶ್ವರ, ರವಿಶಂಕರ ಆಚಾರ್ಯ ಮಂಗಳೂರು, ಸೊಸೆ ಉಷಾ, ಸಹೋದರಿಯರಾದ ಲಲಿತಾ, ಕಮಲಾಕ್ಷಿ, ತಿಲೋತ್ತಮ, ಶ್ರೀಮತಿ, ವಲ್ಲಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಸೋಮನಾಥ ಆಚಾರ್ಯ ಈ ಹಿಂದೆ ನಿಧನ ಹೊಂದಿದ್ದಾರೆ. ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

RELATED NEWS

You cannot copy contents of this page