ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪಳ್ಳಿಕರೆ, ಪೂಚಕ್ಕಾಡ್ ಅನಿವಾಸಿಯ ಮನೆಯಿಂದ 45 ಪವನ್ ಚಿನ್ನಾಭರಣ ಹಾಗೂ 5೦,೦೦೦ ರೂ. ಕಳವುಗೈದ ಪ್ರಕರಣದ ಆರೋಪಿಯನ್ನು ಸ್ಥಳಕ್ಕೆ ತಲುಪಿಸಿ ಪರಿಶೀಲನೆ ನಡೆಸಲಾಯಿತು. ತಮಿಳುನಾಡು ಮೇಟುಪಾಳಯಂ ನಿವಾಸಿ ರಾಜನ್ ಯಾನೆ ಅಣ್ಣಾಚಿರಾಜನ್ನನ್ನು ಪೂಚಕ್ಕಾಡ್ ಅರಯಾಲ್ತರದ ಅನಿವಾಸಿ ಅಬ್ದುಲ್ ಮಜೀದ್ರ ಮನೆಗೆ ಕರೆತಂದು ಹೇಳಿಕೆ ದಾಖಲಿಸಲಾಗಿದೆ. ಮೇ ೯ರಂದು ರಾತ್ರಿ ಅಬ್ದುಲ್ ಮಜೀದ್ರ ಮನೆಯಿಂದ ಕಳವು ನಡೆದಿತ್ತು. ಮನೆ ಮಂದಿ ಸಂಬಂಧಿಕರ ಮನೆಗೆ ತೆರಳಿದಾಗ ಕಳವು ನಡೆಸಲಾಗಿತ್ತು. ನೆರೆಮನೆಯಿಂದ ಪಿಕ್ಕಾಸು ತೆಗೆದುಕೊಂಡು ಬಾಗಿಲನ್ನು ಮುರಿದು ಒಳನುಗ್ಗಿ ಕಪಾಟಿನಿಂದ ಚಿನ್ನಾಭರಣ ಹಾಗೂ ಹಣವನ್ನು ಕಳವುಗೈದ ರೀತಿಯನ್ನು ರಾಜನ್ ತನಿಖಾ ತಂಡದೊಂದಿಗೆ ವಿವರಿಸಿದ್ದಾನೆ. ಬಳಿಕ ಆವರಣಗೋಡೆ ಹಾರಿ ಪರಾರಿಯಾದ ಬಗ್ಗೆಯೂ ಮಾಹಿತಿ ನೀಡಿದ್ದಾನೆ.
ಕಸ್ಟಡಿಯಲ್ಲಿರುವ ಆರೋಪಿಯನ್ನು ಸ್ಥಳಕ್ಕೆ ಕರೆದುತರುತ್ತಾರೆ ಎಂಬ ಮಾಹಿತಿ ತಿಳಿದು ಸ್ಥಳೀಯರು ಅಲ್ಲಿ ಸೇರಿದ್ದರು. ಕಳವುಗೈದ ಚಿನ್ನಾಭರಣವನ್ನು ಇತ್ತೀಚೆಗೆ ಕಣ್ಣೂರಿನ ರಹಸ್ಯ ಕೇಂದ್ರದಿಂದ ಆರೋಪಿಯ ಸಹಾಯದೊಂದಿಗೆ ತಂಡ ಪತ್ತೆಹಚ್ಚಿದೆ. ಹೇಳಿಕೆ ದಾಖಲು ಮುಗಿಸಿದ ಬಳಿಕ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.






