ಆರೋಪಿ ಬಾಯಾರುಪದವು ನಿವಾಸಿ ನೀಡಿದ ಹೇಳಿಕೆಯ ಜಾಡು ಹಿಡಿದು ಪೊಲೀಸರು ಕಾರ್ಯಾಚರಣೆ: ಕೇರಳಕ್ಕೆ ಮಾದಕದ್ರವ್ಯ ಸಾಗಾಟ ಜಾಲದ ಮೂವರು ವಿದೇಶೀಯರೂ ಸೇರಿ 11 ಮಂದಿ ಸೆರೆ

ಕಾಸರಗೋಡು: ಮಾದಕದ್ರವ್ಯ ಪ್ರಕರಣವೊಂದಕ್ಕೆ ಸಂಬಂಧಿಸಿ ಮಂಜೇಶ್ವರ ಬಾಯಾರುಪದವು ನಿವಾಸಿ ಹಾಗೂ ಇನ್ನೋರ್ವ ಆರೋಪಿ ವಿಚಾರಣೆ ವೇಳೆ ನೀಡಿದ ಹೇಳಿಕೆಯ ಜಾಡು ಹಿಡಿದು ಪೊಲೀಸರು ನಡೆಸಿದ ಅತ್ಯಂತ ಯಶಸ್ವಿ ಕಾರ್ಯಾಚರಣೆಯಲ್ಲಿ ಕೇರಳಕ್ಕೆ ಮಾದಕದ್ರವ್ಯ ಸಾಗಿಸುವ ಜಾಲಕ್ಕೆಸೇರಿದ ಮೂವರು ವಿದೇಶಿಯರೂ ಸೇರಿ 11 ಮಂದಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.  ಟಾನ್ಸಾನಿಯನ್ ನಿವಾಸಿಗಳಾದ ಡೇವಿಡ್ ಎನ್ಡ್‌ಮಿ, ಅತ್‌ಕ್ ಅರುಣ್ ಮತ್ತು ಫ್ರಾಂಕ್ ಎಂಬೀ ಮೂವರು ವಿದೇಶಿಯರು ಹಾಗೂ ವಿವಿಧ ರಾಜ್ಯಗಳ ಇತರ 9 ಮಂದಿ ಬಂಧಿತರಾದ  ಈ ಮಾದಕದ್ರವ್ಯ ಸಾಗಾಟ ದಂಧೆಯ ಕೊಂಡಿಗಳಾಗಿದ್ದು ಇವರನ್ನು ದೇಶದ  ವಿವಿಧೆಡೆಗಳಿಂದ ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಜನವರಿಯಲ್ಲಿ ಕಲ್ಲಿಕೋಟೆ ನರ್ಕೊಟಿಕ್ಸ್ ಸೆಲ್ ಅಸಿಸ್ಟೆಂಟ್ ಕಮಿಶನರ್ ಕೆ.ಎ ಬೋಸ್ ನೇತೃತ್ವದ ಪೊಲೀಸರ ತಂಡ ಕಲ್ಲಿಕೋಟೆಯ ಕಾರಂತೂರಿನ  ಐಷಾರಾಮಿ ಹೋಟೆಲೊಂದಕ್ಕೆ ನಡೆಸಿದ ದಾಳಿಯಲ್ಲ್ಲಿ 221.89 ಗ್ರಾಂ ಮಾದಕದ್ರವ್ಯ ವಾದ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿತು. ಅದಕ್ಕೆ ಸಂಬಂಧಿಸಿ ಮಂಜೇಶ್ವರ ಬಾಯಾರುಪದವು ಹೌಸ್‌ನ ಇಬ್ರಾಹಿಂ ಮುಸಾಮಿಲ್ (27) ಮತ್ತು ವಳ್ಳಿಪರಂಬು ಉಮ್ಮಕತ್ತೂರು ಶಿವಗಂಗಾದ ಪಿ.ಎನ್. ಅಭಿನವ್ (24) ಎಂಬಿವರನ್ನು ಪೊಲೀಸರು ಬಂಧಿಸಿದ್ದರು. ಇವರನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ಅವರು ಕೇರಳಕ್ಕೆ ಮಾದಕದ್ರವ್ಯ ಸಾಗಿಸುವ  ಜಾಲಕ್ಕೆ ಸೇರಿದವರ ಬಗ್ಗೆ ಬಾಯಿ ಬಿಟ್ಟಿದ್ದರು. ಅದರ ಜಾಡು ಹಿಡಿದು ಕಲ್ಲಿಕೋಟೆ ಪೊಲೀಸರು ಕಳೆದ ನಾಲ್ಕು ತಿಂಗಳಿಂದ ನಿರಂತರವಾಗಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ  ಈ ಮೂವರು ವಿದೇಶಿಯರೂ ಸೇರಿದಂತೆ  ಈ ಜಾಲಕ್ಕೆ ಸೇರಿದ 11 ಮಂದಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಭಾರತದ ವಿವಿಧ 13 ರಾಜ್ಯಗಳಿಂದಾಗಿ ಇವರನ್ನು ಬಂಧಿಸಲಾಗಿದೆ.

ವಿವಿಧ ರಾಜ್ಯಗಳಿಗೆ ಮಾದಕವಸ್ತುಗಳನ್ನು ರಖಂ ಆಗಿ ಪೂರೈಸುವ ಮಂಗಳೂರು ನಿವಾಸಿ ಇಮ್ರಾನ್ ಇರ್ಷಾದ್ (30)ನನ್ನು ಕರ್ನಾಟಕ ಹಾಸನದಿಂದ ಇತ್ತೀಚೆಗೆ ಅಲ್ಲಿನ ಪೊಲೀಸರು ಬಂಧಿಸಿದ್ದರು. ಈತ ಆಫ್ರಿಕನ್ ಪ್ರಜೆಗಳಿಂದ ರಖಂ ಆಗಿ ಮಾದಕದ್ರವ್ಯ ಖರೀದಿಸಿ ಅದನ್ನು ಅಗತ್ಯದವರಿಗೆ ಪೂರೈಸುವ ಪ್ರಧಾನ ಸೂತ್ರಧಾರನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಟ್ಸಪ್ ಇತ್ಯಾದಿ ಸೋಶಿಯಲ್ ಮೀಡಿಯಾ ಮೂಲಕ ಪರಸ್ಪರ ಆಶಯವಿನಿಮಯ ಮೂಲಕ ಈ ದಂಧೆಯವರು ಮಾದಕ ಮಾರಾಟ ದಂಧೆ ನಡೆಸುತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page