ಪೆರ್ಲ: ಎಣ್ಮಕಜೆ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ನಾಳೆ ನಡೆಸಲಾಗುವುದು. ಕಳೆದ 5 ವರ್ಷದಿಂದ ಪಂಚಾಯತ್ ಆಡಳಿತ ಸಮಿತಿ ನೇತೃತ್ವದಲ್ಲಿ ಹಿರಿಯರಿಗೆ ಗೌರವ, ಕಿರಿಯರಿಗೆ ಪ್ರೋತ್ಸಾಹ ಎಂಬ ಗುರಿಯಿರಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು. ಈ ಬಾರಿಯೂ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸುವುದಾಗಿ ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್. ಈ ಬಗ್ಗೆ ನಡೆದ ಸಮಾಲೋಚನಾ ಸಭೆಯಲ್ಲಿ ತಿಳಿಸಿದ್ದಾರೆ. ಪಂಚಾಯತ್ ಉಪಾಧ್ಯಕ್ಷೆ ರಮ್ಲ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ್, ಕಾರ್ಯದರ್ಶಿ ಶಾನವಾಸ್, ಸಹಾಯಕ ಕಾರ್ಯದರ್ಶಿ ಗಿರೀಶ್ ಉಪಸ್ಥಿತರಿದ್ದರು. ನಾಳೆ ಬೆಳಿಗ್ಗೆ ಧ್ವಜಾರೋಹಣದ ಬಳಿಕ ವಾರ್ಡ್ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳು, ಮಧ್ಯಾಹ್ನ 1.30ಕ್ಕೆ ಪಂಚಾಯತ್ ಕಚೇರಿ ಪರಿಸರದಿಂದ ಮೆರವಣಿಗೆ, 2 ಗಂಟೆಗೆ ಭಾರತಿ ಸದನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸುವರು. ಸಾಧಕರಿಗೆ ಸನ್ಮಾನ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಎ ಪ್ಲಸ್ ಅಂಕ ಗಳಿಸಿದ 21, ಪ್ಲಸ್ ಟುವಿನಲ್ಲಿ ಎ ಪ್ಲಸ್ ಗಳಿಸಿದ 10, ಕರ್ನಾಟಕ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ 7 ಮಂದಿ ವಿದ್ಯಾರ್ಥಿಗಳನ್ನು ಹಾಗೂ ಪಂಚಾಯತ್ ಮಟ್ಟದಲ್ಲಿ ಸಾಧನೆ ಮಾಡಿದ ಸೇವಾ ಸಂಸ್ಥೆಗಳನ್ನು ಅಭಿನಂದಿಸಲಾಗುವುದು.
