ಕಲ್ಲಿಕೋಟೆ: ಕಲ್ಲಿಕೋಟೆಯ ವ್ಯಾಪಾರ ಕೇಂದ್ರವಾಗಿರುವ ವಲಿಯಂಗಾಡಿಯಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಕುಸಿದು ಬಿದ್ದು ನಾಲ್ವರು ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆಗೆ ಸಂಬಂಧಿಸಿ ಅದರ ಗುತ್ತಿಗೆದಾರನನ್ನು ಅಮಾನತುಗೊಳಿಸಲಾಗಿದೆ.
ಕಲ್ಲಿಕೋಟೆ ಕಾರ್ಪರೇಶನ್ನ ಮಾಲಕತ್ವದಲ್ಲಿರುವ 60 ವರ್ಷದಷ್ಟು ಹಳೆಯದಾದ ಕಟ್ಟಡದ ಸನ್ಶೇಡ್ನ ಸ್ಲ್ಯಾಬ್ ನಿನ್ನೆ ಮಧ್ಯಾಹ್ನ ಕುಸಿದು ಅದರ ಅಡಿಭಾಗದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಕಾರ್ಮಿಕರ ದೇಹದ ಮೇಲೆ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಇದರಲ್ಲಿ ತಲೆಹೊರೆ ಕಾರ್ಮಿಕ ಕಿರಾಶೇರಿಯ ಪಿ.ಎ. ಅಬ್ದುಲ್ ಜಬ್ಬಾರ್ (60), ಅತ್ತೋಳಿ ನಿವಾಸಿಗಳಾದ ಕುನಿ ಅಶ್ರಫ್ (56), ಬಶೀರ್ (65) ಮತ್ತು ತಿರುವಂಗೂರ್ನ ವಿನೋದ್ (53) ಎಂಬವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಕಲ್ಲಿಕೋಟೆ ಸರಕಾರಿ ಬೀಚ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಹೀಗೆ ಕುಸಿದು ಬಿದ್ದ ಈ ಹಳೆ ಕಟ್ಟಡದಲ್ಲಿ ಈ ಹಿಂದೆ ಪಾಸ್ಪೋರ್ಟ್ ಕಚೇರಿ ಕಾರ್ಯಾಚರಿಸುತ್ತಿತ್ತು. ಈಗ ಅದನ್ನು ಸಂಸ್ಥೆಯೊಂದರ ಗೋದಾಮು ಆಗಿ ಉಪಯೋಗಿಸಲಾಗುತ್ತಿದೆ. ಇದು ಹಳೆ ಕಟ್ಟಡವಾಗಿರುವುದರಿಂದ ಅದನ್ನು ತೆರವುಗೊಳಿಸುವಂತೆ ಕಾರ್ಪೋರೇಶನ್ ಈ ಹಿಂದೆಯೇ ನಿರ್ದೇಶ ನೀಡಿತ್ತು.







