ಕೆ.ಎಸ್.ಯು ಪ್ರತಿಭಟನೆ ಮಧ್ಯೆ ಆರೋಗ್ಯ ಸಚಿವೆಗೆ ಗಾಯ: ಐವರು ಕೆ.ಎಸ್.ಯು ಕಾರ್ಯಕರ್ತರ ವಿರುದ್ಧ ಹತ್ಯೆಯತ್ನ ಪ್ರಕರಣ ದಾಖಲು, ನ್ಯಾಯಾಂಗ ಬಂಧನ; ಸಿಪಿಎಂನಿಂದ ವ್ಯಾಪಕ ಪ್ರತಿಭಟನೆ ಕಣ್ಣೂರಿನಲ್ಲಿ ಸಂಘರ್ಷಾವಸ್ಥೆ

ಕಣ್ಣೂರು: ಕಣ್ಣೂರು ರೈಲು ನಿಲ್ದಾಣ ದಲ್ಲಿ ಕೆಎಸ್‌ಯು ಕಾರ್ಯಕರ್ತರು ಕಪ್ಪು ಪತಾಕೆ ಬೀಸಿ ಪ್ರತಿಭಟಿಸುತ್ತಿದ್ದ ಮಧ್ಯೆ ಆರೋಗ್ಯ ಸಚಿವೆ ವೀಣಾ ಜೋರ್ಜ್ ಗಾಯಗೊಂಡ ಘಟನೆಗೆ ಸಂಬಂಧಿಸಿ ಕೆಎಸ್‌ಯುನ ಕಣ್ಣೂರು ಜಿಲ್ಲಾಧ್ಯಕ್ಷ ಎಂ.ಸಿ. ಅತುಲ್, ಜಿಲ್ಲಾ ಕೋಶಾಧಿಕಾರಿ ಅಕ್ಷಯ್ ಮಾಟ್ಟೂಲ್, ಸಿ.ಎಚ್. ಮುಬಾಸ್ ಬಿತುನ್ ಬಾಲನ್ ಮತ್ತು ಮೊಹಮ್ಮದ್ ಯಾಸಿನ್ ಎಂಬಿ ವರ ವಿರುದ್ದ ಪೊಲೀಸರು ಹತ್ಯೆಯತ್ನ ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಿದ್ದಾರೆ. ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ಇದು ಸಚಿವರನ್ನು ಹತ್ಯೆಗೈಯ್ಯಲು ನಡೆಸಿದ ಒಳಸಂಚಾಗಿದೆಯೆಂದು ಸಿಪಿಎಂ ಆರೋಪಿಸಿ ಅದರ ಹೆಸರಲ್ಲಿ ರಾಜ್ಯ ವ್ಯಾಪಕವಾಗಿ ಪ್ರತಿಭಟನೆ ಆರಂಭಿಸಿದೆ. ಕಣ್ಣೂರಿನಲ್ಲಿ ಸಿಪಿಎಂ ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳುತ್ತಿದ್ದು, ಈ ಮಧ್ಯೆ ಇಂದು ಮುಂಜಾನೆ ಕೊಡಿಯೇರಿಯಲ್ಲಿರುವ ಕಾಂಗ್ರೆಸ್ ಪಾರೋಲ್ ಮಂಡಲ ಕಚೇರಿಗೆ ಅಕ್ರಮಿಗಳ ತಂಡವೊಂದು ಕಿಚ್ಚಿರಿಸಿದೆ. ಅಗ್ನಿಶಾಮಕ  ದಳ ಆಗಮಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾ ಹುತ ತಪ್ಪಿಸಿದ್ದಾರೆ. ಇದು ಮಾತ್ರವಲ್ಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾಂಗ್ರೆಸ್‌ನ ಧ್ವಜಸ್ತಂಭ, ಫ್ಲೆಕ್ಸ್ ಬೋರ್ಡ್ ಇತ್ಯಾದಿಗಳನ್ನು ನಾಶಗೊಳಿಸಲಾಗಿದೆ.

ಕಣ್ಣೂರು ಜಿಲ್ಲೆಯಲ್ಲಿ ಇದು ಹೆಚ್ಚಿನ ಸಂಘರ್ಷಾವಸ್ಥೆ ಸೃಷ್ಟಿಸಿದೆ. ಕಾಸರಗೋಡು ಜಿಲ್ಲೆಯಲ್ಲಿ ನಿನ್ನೆ ಸಿಪಿಎಂ-ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ಕಾರ್ಯಕರ್ತರು ಹಲವೆಡೆಗಳಲ್ಲಿ ಪ್ರತಿಭಟನೆ ನಡೆಸಿದರು.

ಗಾಯಗೊಂಡ ಆರೋಗ್ಯ ಸಚಿವೆಯನ್ನು ಮೊದಲು ಕಣ್ಣೂರು ಜಿಲ್ಲಾಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಉನ್ನತ ಮಟ್ಟದ ಚಿಕಿತ್ಸೆಗಾಗಿ  ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಅಲ್ಲಿ ಎಂಆರ್‌ಐ ಸ್ಕ್ಯಾನಿಂಗ್‌ಗೊಳಪಡಿ ಸಲಾಯಿತು. ಸಚಿವರ ಕುತ್ತಿಗೆ ಹಾಗೂ ಕೈಗೆ ಗಾಯವುಂಟಾಗಿದೆಯೆಂದೂ ಆದರೆ ಅದು ಗಂಭೀರ ಗಾಯವಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿಧಾನಸಭಾ ಧ್ಯಕ್ಷ ಎ.ಎನ್. ಶಂಸೀರ್ ಮತ್ತು ಸಿಪಿಎಂನ ಹಲವು ಉನ್ನತ ನೇತಾರರು ಆಸ್ಪತ್ರೆಗೆ ಆಗಮಿಸಿ ಸಚಿವರ ಆರೋಗ್ಯ ಸ್ಥಿತಿ ಬಗ್ಗೆ ವಿಚಾರಿಸಿದರು. ಸಚಿವರ ಮೇಲೆ ನಡೆಸಲಾದ ದಾಳಿ ಕಾಂಗ್ರೆಸ್‌ನ ಹೀನ ರಾಜಕೀಯವಾಗಿದೆಯೆಂದು ಮುಖ್ಯಮಂತ್ರಿ ಹೇಳಿದ್ದಾರೆ. ಇನ್ನೊಂದೆಡೆ ಸಚಿವರ  ಹತ್ಯೆಗಾಗಿ ನಡೆದ ಯತ್ನ ಇದಾಗಿದೆಯೆಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಆರೋಪಿಸಿದ್ದಾರೆ.

ಕಣ್ಣೂರಿನಲ್ಲಿ ನಿನ್ನೆ ಮುಖ್ಯಮಂತ್ರಿ  ಪಿಣರಾಯಿ ವಿಜಯನ್‌ರ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾ ಗಿತ್ತು.  ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಚಿವೆ ವೀಣಾ ಜೋರ್ಜ್ ಕೂಡಾ ಭಾಗವಹಿಸಿ ದ್ದರು. ನಂತರ ಅಲ್ಲಿಂದ ತಿರುವನಂತಪುರಕ್ಕೆ ರೈಲಿನಲ್ಲಿ ಹಿಂತಿರುಗಲೆಂದು ನಿನ್ನೆ ಅಪರಾಹ್ನ 3.30ರ ವೇಳೆಗೆ ಕಣ್ಣೂರು ರೈಲು ನಿಲ್ದಾಣದ ಒಂದನೇ ಫ್ಲಾಟ್ ಫಾಂಗೆ  ಆಗಮಿಸಿದ ವೇಳೆ ಕೆಎಸ್‌ಯುನ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಐವರು ಕಾರ್ಯಕರ್ತರು ಅಲ್ಲಿಗೆ ಬಂದು ಸಚಿವರ ವಿರುದ್ಧ ಕಪ್ಪು ಪತಾಕೆ ಬೀಸಿ ಸಚಿವರು ರಾಜೀನಾಮೆ ನೀಡುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಆಗ ಪ್ರತಿಭಟನೆಗಾರರನ್ನು ಪೊಲೀಸರು ತಕ್ಷಣ ವಶಕ್ಕೆ ತೆಗೆದುಕೊಂಡು ಅಲ್ಲಿಂದ ಒಯ್ದರು. ಆ ವೇಳೆ ಸಚಿವರು ಗಾಯ ಗೊಂಡಿರುವುದಾಗಿ ಹೇಳಲಾಗುತ್ತಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾ ಯಿತು. ಆದರೆ ಸಚಿವರಿಗೆ ಗಾಯ ಹೇಗೆ ಉಂಟಾಯಿತು ಎಂಬುವುದರ ಬಗ್ಗೆ ಇನ್ನೂ ಸ್ಪಷ್ಟಗೊಂಡಿಲ್ಲ. ಆ ಬಗ್ಗೆ  ಪೊಲೀಸರು ಪರಿಸರದ ಸಿಸಿ ಟಿವಿಗಳನ್ನು ಪರಿಶೀಲಿಸಿ ಖಾತರಿಪಡಿಸುವ ಯತ್ನದಲ್ಲಿ ತೊಡಗಿದ್ದಾರೆ.

ಇದಾದ ಬೆನ್ನಲ್ಲೇ ಕಾಂಗ್ರೆಸ್‌ನ ಕಣ್ಣೂರು ಜಿಲ್ಲಾ ಕಚೇರಿಗೆ ಎಸ್‌ಎಫ್‌ಐ ಕಾರ್ಯಕರ್ತರು ಪ್ರತಿಭಟನೆಯೊಂದಿಗೆ ಸಾಗಿ ಕಚೇರಿಗೆ ನುಗ್ಗಲೆತ್ನಿಸಿದರು.  ಆ ವೇಳೆ ಕಲ್ಲು ತೂರಾಟವೂ ನಡೆಯಿತು. ಕಲ್ಲೇಟಿನಿಂದ ಕೆಎಸ್‌ಯು ಪ್ರಧಾನ ಕಾರ್ಯದರ್ಶಿ ಫರ್ಹಾನ್ ಮುಂಡೇರಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.  ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ಇಂದೂ ಮುಂದುವರಿದಿದೆ.

RELATED NEWS

You cannot copy contents of this page