ಕಾಸರಗೋಡು: ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಉಂಟಾಗಿರುವ ಸಮಸ್ಯೆ ತಾರಕಕ್ಕೇರುವ ಲಕ್ಷಣಗಳು ಗೋಚರಿಸುತ್ತಿದೆ. ಬೆಂಗಳೂರು, ಮಂಗಳೂರು ಮೊದಲಾದ ಪೇಟೆಗಳಲ್ಲಿ ವಾಣಿಜ್ಯ ಬಳಕೆಯ ಅಡುಗೆ ಅನಿಲ ಜಾಡಿಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಹೋಟೆಲ್, ರೆಸ್ಟೋರೆಂಟ್ಗಳನ್ನು ಮುಚ್ಚುವ ಪರಿಸ್ಥಿತಿ ಉಂಟಾಗಿರುವ ಮಧ್ಯೆ ಕಾಸರಗೋಡು ಜಿಲ್ಲೆಯಲ್ಲೂ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ಗೆ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ಹೋಟೆಲ್ಗಳು ಸೌದೆ ಒಲೆಯತ್ತ ತಿರುಗಿವೆ. ಕಾಸರಗೋಡು ಜಿಲ್ಲಾ ಪಂಚಾಯತ್ನ ನೇತೃತ್ವದ ಕುಟುಂಬಶ್ರೀ ಕಫೆಯಲ್ಲಿ ನಿನ್ನೆಯಿಂದ ಅಡುಗೆ ಒಲೆಯಲ್ಲಿ ಮಾಡಲು ಆರಂಭಿಸಿದ್ದಾರೆ. ಅಡುಗೆ ಅನಿಲ ಲಭ್ಯವಾಗದಿರುವುದೇ ಇದಕ್ಕೆ ಕಾರಣವೆಂದು ಅಲ್ಲಿನ ಕಾರ್ಮಿಕರು ತಿಳಿಸಿದ್ದಾರೆ. ಇನ್ನೆಷ್ಟು ದಿನ ಈ ರೀತಿ ಅಡುಗೆ ಮಾಡಬೇ ಕಾಗಿ ಬರಬಹುದೆಂಬುದು ತಿಳಿದಿಲ್ಲ ವೆಂದು ಅವರು ನುಡಿದಿದ್ದು, ಸೌದೆಗೂ ಕ್ಷಾಮವಿದೆ ಎಂದು ತಿಳಿಸಿದ್ದಾರೆ.
ಮಂಗಳೂರು ಸುರತ್ಕಲ್, ಬೈಕಂಪಾಡಿ ಎಚ್ಪಿಸಿಎಲ್, ಐಒಸಿಎಲ್, ಬಿಪಿಸಿಎಲ್ನಂತಹ ಪ್ರಮುಖ ಗ್ಯಾಸ್ ಕಂಪೆನಿಗಳ ಘಟಕಗಳಿದ್ದು, ಇಲ್ಲಿಂದ ಹೆಚ್ಚಿನ ಕಡೆಗಳಿಗೆ ಗ್ಯಾಸ್ ಸಿಲಿಂಡರ್ ಪೂರೈಕೆಯಾಗುತ್ತದೆ. ಆದರೆ ವಾಣಿಜ್ಯ ಸಿಲಿಂಡರ್ ಪೂರೈಕೆಯ ಮೇಲೆ ಕೇಂದ್ರ ಸರಕಾರ ನಿಯಂತ್ರಣ ಹೇರಿದ್ದು, ಇದು ಹೋಟೆಲ್, ದೇವಸ್ಥಾನ ಸಹಿತ ವಿವಿಧ ಕಡೆಗಳಲ್ಲಿ ಸಮಸ್ಯೆಗೆ ಕಾರಣವಾಗುತ್ತಿದೆ.
ಗೃಹಬಳಕೆಯ ಸಿಲಿಂಡರ್ಗಳನ್ನು ಈ ಹಿಂದೆ 21 ದಿನಕ್ಕೆ ಬುಕ್ಕಿಂಗ್ ಮಾಡಬಹುದಾಗಿತ್ತು. ಆ ಅವಧಿಯನ್ನು ಈಗ 30 ದಿನಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ ಬುಕ್ಕಿಂಗ್ನಲ್ಲೂ ಸಮಸ್ಯೆ ಕಂಡು ಬರುತ್ತಿದ್ದು, ಪೂರೈಕೆ ಸರಿಯಾಗಿ ನಡೆಯುತ್ತಿಲ್ಲವೆಂದು ಸಾರ್ವಜನಿಕರು ದೂರಿದ್ದಾರೆ. ಈ ಮಧ್ಯೆ ಕೆಲವರು ವಿದ್ಯುತ್ ಉಪಕರಣಗಳನ್ನು ಉಪ ಯೋಗಿಸಿ ಅಡುಗೆ ಮಾಡಲು ಆರಂ ಭಿಸಿದ್ದು, ಅದರಿಂದ ವಿದ್ಯುತ್ಗೂ ಕ್ಷಾಮ ಉಂಟಾಗಬಹುದೆಂಬ ಆತಂಕ ನೆಲೆಗೊಂಡಿದೆ. ಜಿಲ್ಲೆಯ ಇತರ ಹೋಟೆಲ್ಗಳಲ್ಲೂ ಅಡುಗೆ ಅನಿಲ ಲಭ್ಯತೆಯ ಕೊರತೆ ಸವಾಲಾ ಗಿದ್ದು, ಈ ಪರಿಸ್ಥಿತಿ ಮುಂದುವರಿದರೆ ಹೋಟೆಲ್ಗಳ ಚಟುವಟಿಕೆಯನ್ನು ಸೀಮಿತಗೊಳಿಸಬೇಕಾಗಿ ಬರಬಹುದೇ ಎಂಬ ಆತಂಕ ನೆಲೆಗೊಂಡಿದೆ.






