ಪೈವಳಿಕೆ: ಹಲವು ತಿಂಗಳ ಹಿಂದೆಯೇ ಆರಂಭಗೊಂಡ ಆದರೆ ಇನ್ನೂ ಪೂರ್ತಿಗೊಳ್ಳದ ಪೈವಳಿಕೆ ಪಂಚಾಯತ್ನ ಲಾಲ್ಭಾಗ್- ಕುರುಡಪದವು ಲೋಕೋಪಯೋಗಿ ಇಲಾಖೆ ರಸ್ತೆಯ ಕಾಮಗಾರಿಯನ್ನು ಶೀಘ್ರವೇ ಮುಗಿಸಿ ವಾಹನ ಸಂಚಾರಕ್ಕೆ ತೆರೆದುಕೊಡಬೇಕೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಆಗ್ರಹಿಸಿದ್ದಾರೆ. ಅವರು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಮಾತನಾಡುತ್ತಿದ್ದರು.
ಲಾಲ್ಭಾಗ್ನಿಂದ ಅಮ್ಮೇರಿ ತನಕ ನಾಲ್ಕೂವರೆ ಕೋಟಿ ರೂ. ವೆಚ್ಚದಲ್ಲಿ ಮೂರೂವರೆ ಕಿಲೋ ಮೀಟರ್ ರಸ್ತೆ ಅಭಿವೃದ್ಧಿ ನಡೆಯುತ್ತಿದೆ. ಆದರೆ ಕಾಮಗಾರಿ ಇದುವರೆಗೂ ಪೂರ್ತಿಗೊಳ್ಳದಿರುವುದು ಸ್ಥಳೀಯರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ ೨ ತಿಂಗಳಿಂದ ಈ ರಸ್ತೆಯಲ್ಲಿ ಬಸ್ ಸಹಿತ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಪ್ರಸ್ತುತ ಬಾಯಾರ್ಪದವು ಮೂಲಕ ಸಾಗಿ ಒಳ ರಸ್ತೆಯಲ್ಲಿ ಸುತ್ತುಬಳಸಿ ಸಂಚರಿಸಬೇಕಾಗುತ್ತಿದೆ. ರಸ್ತೆಯ ಕಾಮಗಾರಿಯನ್ನು ಕೇವಲ ಬೆರಳೆಣಿಕೆ ಯಷ್ಟು ಮಂದಿ ಕಾರ್ಮಿಕರು ನಿರ್ವಹಿಸುತ್ತಿರುವುದು ಕಾಮಗಾರಿ ವಿಳಂಬಗೊಳ್ಳಲು ಕಾರಣವೆನ್ನಲಾ ಗಿದೆ. ಡಾಮರೀಕರಣ, ಚರಂಡಿ ನಿರ್ಮಾಣ, ವಿದ್ಯುತ್ ಕಂಬಗಳ ಅಳವಡಿಕೆ ಮೊದಲಾದ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಊರವರು ದೂರಿದ್ದು, ಗುತ್ತಿಗೆದಾರನ ನಿರ್ಲಕ್ಷ್ಯ ಇದಕ್ಕೆ ಕಾರಣವೆಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ತಂಡ ಈ ಸ್ಥಳಕ್ಕೆ ಭೇಟಿ ನೀಡಿದ್ದು ಶೀಘ್ರವೇ ಕಾಮಗಾರಿ ಮುಗಿಸದಿದ್ದರೆ ಜಿಲ್ಲಾ ಸಮಿತಿ, ಪಂಚಾಯತ್ ಘಟಕ ಪ್ರತಿಭಟನೆಗೆ ಮುಂದಾಗಲಿದೆ ಎಂದು ಅಶ್ವಿನಿ ತಿಳಿಸಿದ್ದಾರೆ.







