ಮಲಪ್ಪುರಂ: ಕುಟುಂಬ ಕಲಹ ಮುಂದುವರಿದ ಪ್ರಕರಣದಲ್ಲಿ ಅತ್ತೆ ಸೊಸೆಯನ್ನು ಕಡಿದು ಕೊಲೆಗೈದ ಘಟನೆ ನಡೆದಿದೆ. ನಿಲಂಬೂರು ಕರುಳಾಯಿಯಲ್ಲಿ ಇಂದು ಮುಂಜಾನೆ ಘಟನೆ ನಡೆದಿದೆ. ಕೂಟಂಬಾರ ನಿವಾಸಿ ರಜಿತ (30) ಮೃತಪಟ್ಟ ಸೊಸೆ. ಕಟ್ಟಿಗೆ ಕಡಿಯಲು ಉಪಯೋಗಿಸುವ ಕತ್ತಿಯಿಂದ ಕಡಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ವೇಳೆ ರಜಿತರ ಪತಿ ಹೊರ ಹೋಗಿದ್ದರೆನ್ನಲಾಗಿದೆ. ಕೊಲೆ ಕೃತ್ಯದ ಬಳಿಕ ಅತ್ತೆ ಶಾಂತಾಳನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಬೊಬ್ಬೆ ಕೇಳಿ ಸ್ಥಳಕ್ಕೆ ತಲುಪಿದ ಸ್ಥಳೀಯರು ರಕ್ತದ ಮಡುವಿನಲ್ಲಿ ಬಿದ್ದಿದ್ದ ರಜಿತಳನ್ನು ಕಂಡಿದ್ದಾರೆ. ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯ ಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಬೆಳಿಗ್ಗೆ ಚಹಾ ಕೇಳಿ ನೀಡದಿರುವ ಕಾರಣದಿಂದ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಜಿತಳ ಇಬ್ಬರು ಮಕ್ಕಳು ಮನೆಯಲ್ಲಿದ್ದರು. ಅವರ ಕಣ್ಮುಂದೆಯೇ ಕೊಲೆ ನಡೆದಿದೆ. ಶಾಂತಾಳನ್ನು ಸಮಗ್ರವಾಗಿ ವಿಚಾರಿಸಲಾಗುತ್ತಿದೆ.







