ಮಂಜೇಶ್ವರ: ದ್ವಿಚಕ್ರ ವಾಹನಗಳನ್ನು ಅಪ್ರಾಪ್ತರು ಚಲಾಯಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರು ವಿವಿಧೆಡೆ ವಾಹನ ತಪಾಸಣೆಯನ್ನು ಬಿಗು ಗೊಳಿಸಿದ್ದಾರೆ. ಇದರಂತೆ ಠಾಣೆಯ ಸಿಐ ಜಿಜೀಶ್ ನಿರ್ದೇಶನದಲ್ಲಿ ಎಸ್ಐ ರತೀಶ್, ವೈಷ್ಣವ್ ರಾಮ ಕಾದ್ರನ್, ಉಮೇಶ್ ಕೆ.ಆರ್. ಸಹಿತ ವಿವಿಧ ಅಧಿಕಾರಿಗಳು ಠಾಣಾ ವ್ಯಾಪ್ತಿಯ ವಿವಿಧೆಡೆ ತಪಾಸಣೆ ನಡೆಸುತ್ತಿದ್ದಾರೆ.
ಶನಿವಾರ ಸಂಜೆ ಬೇಕೂರು ಮಸೀದಿ ಬಳಿಯ ರಸ್ತೆಯಲ್ಲಿ, ಭಾನುವಾರ ಮುಂಜಾನೆ ತಲಪಾಡಿಯಲ್ಲಿ ವಾಹನ ತಪಾಸಣೆ ವೇಳೆ ಅಪ್ರಾಪ್ತರು ಚಲಾಯಿಸುತ್ತಿದ್ದ ಎರಡು ಸ್ಕೂಟರ್ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಬಾಲಕರ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿ ನೋಟೀಸ್ ನೀಡಲಾಗಿದೆ. ಠಾಣೆಯಲ್ಲಿ ಪ್ರತೀ ತಿಂಗಳು ಸುಮಾರು 20ರಷ್ಟು ಈ ರೀತಿಯ ಪ್ರಕರಣಗಳು ದಾಖಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನ್ಯಾಯಾಲಯದಲ್ಲಿ ಈ ಪ್ರಕರಣಗಳಿಗೆ ಸುಮಾರು 20000 ರೂ. ದಂಡ ಹೇರಲಾಗುತ್ತಿದ್ದರೂ, ಅಪ್ರಾಪ್ತರ ವಾಹನ ಸವಾರಿ ಹೆಚ್ಚುತ್ತಲೇ ಇದೆ ಎಂದು, ಇದರ ವಿರುದ್ಧ ತೀವ್ರ ತಪಾಸಣೆ ಮುಂದುವರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.






